ಚಿತ್ರದುರ್ಗ: ಪಕ್ಷದ ಸಿದ್ಧಾಂತ, ಕಾರ್ಯಸೂಚಿಗಳನ್ನು ಗೇಲಿ ಮಾಡಿದ್ದ ಕಾಂಗ್ರೆಸ್ ಇಂದು ಸಂಪೂರ್ಣ ನೆಲಕಚ್ಚಿದೆ ಎಂದು ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್ ಹೇಳಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ 40ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಜನಸಂಘ, ಭಾರತೀಯ ಜನತಾ ಪಕ್ಷ ಜನ್ಮ ತಾಳಿದ್ದೇ, ಈ ದೇಶದಲ್ಲಿರುವ ಅನೇಕ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಎಂದರು.
ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಲು 40 ವರ್ಷಗಳ ಹಿಂದೆಯೆ ಬಿಜೆಪಿ ಚಿಂತಿಸಿತ್ತು. ಅಂದಿನಿಂದಲೂ 370 ರದ್ದುಗೊಳಿಸುವುದನ್ನು ವಿರೋಧಿಸಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅಂದು ಪಕ್ಷದ ಚಿಂತನೆಯನ್ನು ಪ್ರಸ್ತುತ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಮುಖಂಡರಾದ ಸಿದ್ದೇಶ್ ಯಾದವ್, ಸುರೇಶ್ ಸಿದ್ದಾಪುರ, ಮಲ್ಲಿಕಾರ್ಜುನ್, ನಾಗರಾಜ್ ಬೇದ್ರೆ, ನಂದಿ ನಾಗರಾಜ್, ಶಶಿಧರ್, ಶಿವಣ್ಣಾಚಾರ್, ದಗ್ಗೆ ಶಿವಪ್ರಕಾಶ್, ವೆಂಕಟೇಶ್ ಯಾದವ್, ಎಸ್.ಅನಿಲ್, ಶಂಭು, ಕಿರಣ್, ರಾಜು ಶಿವನಕೆರೆ ಮತ್ತಿತರರು ಇದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಹೇಳಿಕೆ: ವೈದ್ಯರು, ಪೊಲೀಸರು, ಸೈನಿಕರು ಕರೊನಾ ಹತೋಟಿಗೆ ಹೋರಾಡುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ದಿನಕ್ಕೆ ಒಪ್ಪತ್ತು ಊಟ ಬಿಟ್ಟು ಎಲ್ಲರಿಗೂ ಗೌರವ ಸಮರ್ಪಿಸಬೇಕೆಂಬ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯನ್ನು ಕಾರ್ಯಕರ್ತರು ತಪ್ಪದೆ ಪಾಲಿಸಬೇಕು.