ವಿಜಯವಾಣಿ ವಿಶೇಷ ಚಿತ್ರದುರ್ಗ: ಕರೊನಾ ಸಂಕಟದ ಈ ಸಮಯದಲ್ಲಿ ರಾಜ್ಯ ಸರ್ಕಾರ ಸದ್ದಿಲ್ಲದೆ ಆಸ್ತಿ ಹಾಗೂ ನೀರಿನ ಕರದ ಭಾರವನ್ನು ಹೆಚ್ಚಿಸಿದೆ.
ಮಕ್ಕಳಿಗೆ ಪೆಪ್ಪರ್ಮೆಂಟ್ ಆಸೆ ತೋರಿಸಿದಂತೆ ಜುಲೈ ಅಂತ್ಯದೊಳಗೆ ತೆರಿಗೆ ಪಾವತಿಸಿದರೆ ಶೇ.5 ರಿಯಾಯಿತಿ ನೀಡಲಾಗುವುದು ಎಂದು ಪ್ರಕಟಿಸಿದೆ.
ಏಪ್ರಿಲ್ 1ರಿಂದ ತೆರಿಗೆ ಹೆಚ್ಚಳವಾಗಿದೆ. ಚಿತ್ರದುರ್ಗ ಸಹಿತ ಜಿಲ್ಲೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ನೀರಿನ ಕರ ಹಾಗೂ ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ. ಆದರೆ, ಹಿರಿಯೂರು ನಗರಸಭೆ ನೀರಿನ ಕರವನ್ನು ಮಾತ್ರ ಹೆಚ್ಚಿಸಿಲ್ಲ.
ಚಿತ್ರದುರ್ಗ ನಗರಸಭೆ, ಆಸ್ತಿ ತೆರಿಗೆ, ವಾಣಿಜ್ಯ ಕಟ್ಟಡ, ಕೈಗಾರಿಕೆ, ನಿವೇಶನಗಳಿಂದ, ಬಾಕಿ 2.31 ಕೋಟಿ ರೂ. ಸೇರಿ ಈ ವರ್ಷ 15 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದಿದೆ. ಇದರಲ್ಲಿ ಈಗಾಗಲೇ ಮೇ ಅಂತ್ಯಕ್ಕೆ 3.70 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. 6.48 ಕೋಟಿ ರೂ. ನೀರಿನ ಕರ ವಸೂಲಾಗಬೇಕಿದ್ದು, ಇದರಲ್ಲಿ ಪ್ರಸ್ತುತ 60.50 ಲಕ್ಷ ರೂ. ನೀರಿನ ಕರ ಜಮಾ ಆಗಿದೆ.
ನೀರಿನ ಕರ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಮನೆ ಮಾಲೀಕರು ಶೇ.6 ಬಡ್ಡಿ ಸಹಿತ ಕರವನ್ನು ಪಾವತಿಸಬೇಕಿದೆ ಹಾಗೂ ಅನಧಿಕೃತವಾಗಿ ನಲ್ಲಿ ನೀರಿನ ಸಂಪರ್ಕವನ್ನು ಹೊಂದಿರುವಂಥವರು 10,916 ರೂ. ಪಾವತಿಸಿ ಸಕ್ರಮಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ತಪ್ಪಿದ್ದಲ್ಲಿ ಅನಧಿಕೃತ ಸಂಪರ್ಕ ಕಡಿತಗೊಳಿಸಿ ಕ್ರಿಮಿನಲ್ ಮೊಕ್ಕದ್ದಮೆ ಹೂಡುವ ಎಚ್ಚರಿಕೆಯನ್ನು ನಗರಸಭೆ ಕೊಟ್ಟಿದೆ.
ರಿಯಾಯಿತಿ ಮುಂದುವರಿಕೆ: ಏಪ್ರಿಲ್ ಅಂತ್ಯದೊಳಗೆ ತೆರಿಗೆ ಪಾವತಿಸಿದರೆ ಶೇ.5 ತೆರಿಗೆ ರಿಯಾಯಿತಿ ಪಡೆಯಬಹುದೆಂದು ಈ ಮುನ್ನ ಪ್ರಕಟಿಸಲಾಗಿತ್ತು. ಆದರೆ, ಕರೊನಾ ಕಾರಣಕ್ಕೆ ಜುಲೈ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಲಾಕ್ಡೌನ್ ಎಫೆಕ್ಟ್ ತೆರಿಗೆ ಸಂಗ್ರಹದ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ. ಆದರೆ, ವಸೂಲಾಗಬೇಕಿದ್ದ ಬಾಡಿಗೆ 10 ಲಕ್ಷ ರೂ. ಗೆ ಸದ್ಯಕ್ಕೆ ಪೆಟ್ಟು ಬಿದ್ದಿದ್ದು, ಸದ್ಯ2 ಲಕ್ಷ ರೂ. ಬಾಡಿಗೆ ವಸೂಲಾಗಿದೆ ಎಂದು ನಗರಸಭೆ ಕಂದಾಯಾಧಿಕಾರಿ ನಾಸೀರ್ ಬಾಷಾ ತಿಳಿಸಿದ್ದಾರೆ.
ಚಿತ್ರದುರ್ಗ ವ್ಯಾಪ್ತಿಯಲ್ಲಿ ತೆರಿಗೆ ವಿವರ
ವಸತಿ ಕಟ್ಟಡ-36418
ವಾಣಿಜ್ಯ ಕಟ್ಟಡ-3613
ಕೈಗಾರಿಕೆ-352
ನಿವೇಶನಗಳು-8000
ನಲ್ಲಿ ನೀರಿನ ಸಂಪರ್ಕ-20 ಸಾವಿರ
ನಗರಸಭೆ ಮಳಿಗೆಗಳು-326
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿರುವ ತೆರಿಗೆ ವಿವರ (ಶೇ.)
ಸಂಸ್ಥೆ ಹೆಸರು-ನೀರಿನ ಕರ-ಆಸ್ತಿ ತೆರಿಗೆ-ವಾಣಿಜ್ಯ ಕಟ್ಟಡ ತೆರಿಗೆ
ಚಿತ್ರದುರ್ಗ ನಗರಸಭೆ-16-20-20
ಚಳ್ಳಕೆರೆ ನಗರಸಭೆ-15-15-25
ಹಿರಿಯೂರು ನಗರಸಭೆ-0-15-15
ಹೊಸದುರ್ಗ ಪುರಸಭೆ-10-30-30.
ಹೊಳಲ್ಕೆರೆ ಪಪಂ-15-15-20
ಮೊಳಕಾಲ್ಮೂರು ಪಪಂ-30-30-30
ನಾಯಕನಹಟ್ಟಿ ಪಪಂ-16-16-30