ಚಿತ್ರದುರ್ಗ: ದಾವಣಗೆರೆಯಲ್ಲಿ ಆ.3ರಂದು ಹಮ್ಮಿಕೊಂಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜನ್ಮ ದಿನಾಚರಣೆ ಬಿಜೆಪಿಯನ್ನು ಬೆಚ್ಚಿ ಬೀಳಿಸಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸೇರುತ್ತಿರುವುದು ಬಿಜೆಪಿಯವರಿಗೆ ನಡುಕ ತರಿಸಿದೆ. ರಾಷ್ಟ್ರೀಯ ನಾಯಕ ರಾಹುಲ್ಗಾಂಧಿ ಅವರು ಭಾಗವಹಿಸುತ್ತಿರುವುದು ಪಕ್ಷಕ್ಕೆ ಆನೆಬಲ ತಂದು ಕೊಡಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ರಾಜ್ಯದಲ್ಲಿ ಸದೃಢವಾಗಿದೆ ಎಂದರು.
ಬಳ್ಳಾರಿಗೆ ಪಾದಯಾತ್ರೆ ನಡೆಸುವ ಮೂಲಕ ಸಿದ್ದರಾಮಯ್ಯ ಅವರು ಈ ಹಿಂದೆ, ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದ್ದರು. ಈಗ ದಾವಣಗೆರೆಯಲ್ಲಿ ನಡೆಯುವ ಜನ್ಮದಿನಾಚರಣೆ ಡಬಲ್ ಇಂಜಿನ್ ಸರ್ಕಾರವನ್ನು ಕಿತ್ತು ಹಾಕಲು ಮುನ್ನುಡಿ ಬರೆಯಲಿದೆ ಎಂದು ಹೇಳಿದರು.
ಜನ್ಮದಿನದ ಅಮೃತ ಮಹೋತ್ಸವ ಕುರಿತಂತೆ ಭೀತಿಗೆ ಒಳಗಾಗಿರುವ ಬಿಜೆಪಿ ನಾಯಕರು ಆಧಾರ ರಹಿತ ಟೀಕೆ ಮಾಡುತ್ತಿದ್ದಾರೆ. ಬಡವರ ವಿರೋಧಿಯಾಗಿ ಹಾಗೂ ಶ್ರೀಮಂತರ ಪರವಾಗಿರುವ ಬಿಜೆಪಿಗೆ ಪಾಠ ಕಲಿಸಲು ಜನರು ಕಾಯುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ ಸೇರಿ ಅನೇಕ ಮುತ್ಸದ್ದಿಗಳ ಜನ್ಮದಿನಕ್ಕೆ ನಾವೆಲ್ಲರೂ ಪಕ್ಷಾತೀತವಾಗಿ ಶುಭ ಕೋರುತ್ತೇವೆ. ಆದರೆ ಯಡಿಯೂರಪ್ಪ ಅವರನ್ನು ಹೊರತುಪಡಿಸಿ, ಬಿಜೆಪಿಯ ಇತರೆ ನಾಯಕರು ಸಿದ್ದರಾಮಯ್ಯ ಜನ್ಮ ದಿನಾಚರಣೆಯನ್ನು ಟೀಕಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದೆಲ್ಲೆಡೆಯಿಂದ ಜನ್ಮದಿನಾಚರಣೆಗೆಂದು ದಾವಣಗೆರೆಗೆ ವಿಶೇಷ ಬಸ್ಸುಗಳನ್ನು ಓಡಿಸುವಂತೆ ಸಾರಿಗೆ ನಿಗಮವನ್ನು ಕೋರಿದರು.ಜಾತಿ ಮೀರಿ ನಮ್ಮಲ್ಲಿ ನಾಯಕರು ಬೆಳೆದಿದ್ದಾರೆ. ಸಿಎಂ ಯಾರಾಗಬೇಕೆಂದು ಶಾಸಕರು ನಿರ್ಧರಿಸುತ್ತಾರೆ ಎಂದರು.