ಚಿತ್ರದುರ್ಗ: ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವುದರೊಂದಿಗೆ ಜೂ.25ರಿಂದ ಜುಲೈ 4ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಭಾನುವಾರ ಜಿಪಂ ಸಭಾಂಗಣದಲ್ಲಿ ಪರೀಕ್ಷೆ ಪೂರ್ವ ಸಿದ್ಧತೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈಗಿನ ಸನ್ನಿವೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಎಂಬ ಆತಂಕ ಯಾರಿಗೂ ಬೇಡ. ಪರೀಕ್ಷೆಯ ಪಾವಿತ್ರೃತೆ ಕಾಪಾಡಲು ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಬೆಳಗ್ಗೆ 10.30ಕ್ಕೆ ಪರೀಕ್ಷೆ ಇರಲಿದ್ದು ಥರ್ಮಲ್ ಸ್ಕಾೃನಿಂಗ್ಗೆ 9-30ಕ್ಕೆ ಬರುವಂತೆ ತಿಳಿಸಲಾಗುವುದು. ಒಂದು ಕೊಠಡಿಯಲ್ಲಿ 18-20 ವಿದ್ಯಾರ್ಥಿಗಳನ್ನು ಸುರಕ್ಷಿತ ಅಂತರದಲ್ಲಿ ಕೂರಿಸಲಾಗುವುದು.
ಪರೀಕ್ಷಾ ಕೇಂದ್ರಗಳು ಡಿಸ್ಇನ್ಫೆಕ್ಷನ್ ಆಗಿರಬೇಕು, ಶೌಚಗೃಹ, ಶುದ್ಧ ಕುಡಿವ ನೀರಿರಬೇಕು ಎಂದು ಸೂಚಿಸಲಾಗಿದೆ. ಕ್ವಾರಂಟೈನ್ಗೆ ಬಳಸಲಾದ ಹಾಸ್ಟೆಲ್, ವಸತಿ ಶಾಲೆಗಳ ಬದಲು ಬೇರೆಡೆ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಅನಾರೋಗ್ಯ ಕಂಡುಬಂದಂಥ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಪರೀಕ್ಷಾ ಕೇಂದ್ರಗಳಲ್ಲಿ ಎರಡು ಹೆಚ್ಚುವರಿ ಕೊಠಡಿ ಮೀಸಲಿಡಲಾಗುವುದು.ಚಿತ್ರದುರ್ಗ ಗಡಿಭಾಗದ 31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಆಯಾ ಜಿಲ್ಲೆಯ ಡಿಸಿಗಳು ಕ್ರಮ ವಹಿಸಲಿದ್ದಾರೆ ಎಂದರು.
ವಲಸೆ ಕಾರ್ಮಿಕರ ಮಕ್ಕಳಿಗೆ ಅವರಿರುವ ಸ್ಥಳದಲ್ಲೇ ಪರೀಕ್ಷೆ ಬರೆಯಲು ಸೂಚಿಸಲಾಗಿದೆ. ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯಕ್ಕೂ ಅನ್ವಯಿಸುತ್ತದೆ. ಜೂನ್ 10ರಿಂದ ಹತ್ತು ದಿನ ಚಂದನ ವಾಹಿನಿಯಲ್ಲಿ ಪುನರ್ ಮನನ ತರಗತಿ ನಡೆಯಲಿವೆ ಎಂದರು.ಸಂಸದ ಎ.ನಾರಾಯಣಸ್ವಾಮಿ ಇತರರು ಉಪಸ್ಥಿತರಿದ್ದರು.
ಮಾರ್ಗಸೂಚಿಗೆ ಕಾಯಲಾಗುತ್ತಿದೆ: ಶೈಕ್ಷಣಿಕ ವರ್ಷಾರಂಭಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಯನ್ನು ಕಾಯಲಾಗುತ್ತಿದೆ. ವರ್ಷಕ್ಕೆ ಇನ್ನು ನೂರು ದಿನಗಳ ತರಗತಿ ಎಂಬುದು ಕೇಂದ್ರದ ಅಭಿಪ್ರಾಯವಲ್ಲ ಎಂದು ಸುರೇಶ್ಕುಮಾರ್ ಸ್ಪಷ್ಟಪಡಿಸಿದರು. ಕೇಂದ್ರಕ್ಕೆ ತಜ್ಞರೊಬ್ಬರು ಕೊಟ್ಟಿರುವ ಸಲಹೆಯಾಗಿದ್ದು, ಈ ಕುರಿತು ಅಧ್ಯಯನ ನಡೆಯುತ್ತಿದೆ. ಪರಸ್ಪರ ಅಂತರಕ್ಕಾಗಿ ತರಗತಿಗಳನ್ನು ಯಾವ ರೀತಿ ನಡೆಸಬೇಕೆಂಬುದರ ಕುರಿತಂತೆ ಡಿಎಸ್ಇಆರ್ಟಿ ಕೂಡ ಅಧ್ಯಯನ ನಡೆಸುತ್ತಿದೆ. ನಿಮಾನ್ಸ್ ನಿರ್ದೇಶಕರ ಅಭಿಪ್ರಾಯದಂತೆ ಆರು ವರ್ಷಗಳ ಮಕ್ಕಳಿಗೆ ಆನ್ಲೈನ್ ತರಗತಿ ಸೂಕ್ತವಲ್ಲ ಎಂದರು.