ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಲ್ಲ 22 ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸಿದ್ದ ಗ್ರಾಮಸಭೆಗಳಲ್ಲಿ ಖುದ್ದು ಪಾಲ್ಗೊಂಡು ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದಾಗಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಸೊಂಡೇಕೊಳ, ಅನ್ನೇಹಾಳ್, ಗೊಡಬನಾಳ್ ಗ್ರಾಪಂಗಳ ವ್ಯಾಪ್ತಿ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಮತ್ತು ರಸ್ತೆ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಆದ್ಯತೆ ಆಧರಿಸಿ ಎಲ್ಲ ಜಾತಿ ಜನರಿಗೆ ಮನೆ ಹಂಚಿಕೆ ಮಾಡಲಾಗಿದೆ. ರಾಜಕಾರಣದಿಂದಾಗಿ ಬಡವರು ವಸತಿ ಸವಲತ್ತುಗಳಿಂದ ವಂಚಿತರಾಗಬಾರದು. ಆದ್ದರಿಂದ ನಾನೇ ಗ್ರಾಮಸಭೆಗಳಲ್ಲಿ ಪಾಲ್ಗೊಂಡು ಆಯ್ಕೆ ಪ್ರಕ್ರಿಯೆ ಉಸ್ತುವಾರಿ ವಹಿಸಿದ್ದೇನೆ. ಪ್ರಸ್ತುತ ಎಲ್ಲ ಗ್ರಾಪಂಗಳಲ್ಲೂ ಗ್ರಾಮ ಸಭೆಗಳು ಪೂರ್ಣಗೊಂಡಿವೆ ಎಂದರು.
ವಸತಿ ಯೋಜನೆಗಳಿಗೆ ಆಯ್ಕೆಯಾದ ಫಲಾನುಭವಿಗಳು ಕಾಲಮಿತಿಯೊಳಗೆ ಮನೆಗಳನ್ನು ನಿರ್ಮಿಸ ಬೇಕು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಬಳಿ ದಾಖಲೆಗಳನ್ನು ಕೊಟ್ಟು ಪರಿಶೀಲಿಸಿಕೊಳ್ಳ ಬೇಕು. ಯಾವುದಾದರೂ ಪಂಚಾಯಿತಿಗೆ ಮನೆಗಳ ಸಂಖ್ಯೆ ಕಡಿಮೆ ಆದಲ್ಲಿ ಉಳಿದ ಕಡೆಗಳಿಂದ ವರ್ಗಾಯಿಸಿ ಕೊಡುವುದಾಗಿ ಹೇಳಿದರು.
ಸೊಂಡೇಕೊಳ ಗ್ರಾಪಂ-ಎಸ್ಸಿ-50, ಎಸ್ಟಿ-15, ಸಾಮಾನ್ಯ-30. ಅನ್ನೇಹಾಳ್ ಗ್ರಾಪಂ-ಎಸ್ಸಿ-60, ಎಸ್ಟಿ-50, ಸಾಮಾನ್ಯ-50. ಗೊಡಬನಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಸ್ಸಿ-45, ಎಸ್ಟಿ-20 ಹಾಗೂ ಸಾಮಾನ್ಯ ವರ್ಗದವರಿಗೆ 30 ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.
ತಾಪಂ ಇಒ ಹನುಮಂತಪ್ಪ, ಸಹಾಯಕ ನಿರ್ದೇಶಕ ಧನಂಜಯ, ಸೊಂಡೇಕೊಳ ಗ್ರಾಪಂ ಅಧ್ಯಕ್ಷೆ ಭಾರತಿ, ಅನ್ನೇಹಾಳ್ ಗ್ರಾಪಂ ಅಧ್ಯಕ್ಷ ನಿರಂಜನ್, ಗೊಡಬನಾಳ್ ಗ್ರಾಪಂ ಅಧ್ಯಕ್ಷೆ ಎಂ.ಜಿ.ಮಾಲಾ ಇತರರಿದ್ದರು.
ಗಂಜಿಗಟ್ಟೆ ಗ್ರಾಮದಲ್ಲಿ 25 ಲಕ್ಷ ರೂ., ಉಪ್ಪನಾಯಕನಹಳ್ಳಿ-60 ಲಕ್ಷ ರೂ., ಗೊಡಬನಾಳ್-65 ಲಕ್ಷ ರೂ., ಅನ್ನೇಹಾಳ್-40 ಲಕ್ಷ ರೂ. ಹಾಗೂ ಮಹಾದೇವನಕಟ್ಟೆಯಲ್ಲಿ 40 ಲಕ್ಷ ರೂ. ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ತಿಪ್ಪಾರೆಡ್ಡಿ, ಒಂದು ತಿಂಗಳ ಒಳಗೆ ಈ ಎಲ್ಲ ಕಾಮಗಾರಿ ಪೂರ್ಣಗೊಳಿಸಬೇಕು.
ಜಿ.ಎಚ್.ತಿಪ್ಪಾರೆಡ್ಡಿ ಶಾಸಕ.