ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಹೋರಾಟವನ್ನು ಮುಂದುವರಿಸ ಬೇಕಿದೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಅಧ್ಯಕ್ಷ ರವಿಕುಮಾರ್ ಹೇಳಿದರು.
ಸಂಘಟನೆಯಿಂದ ನಗರದ ಜೋಗಿಮಟ್ಟಿ ವೃತ್ತದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನೇತಾಜಿ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ನೇತಾಜಿ ತಮ್ಮ ಶ್ರೀಮಂತಿಕೆ, ಐಸಿಎಸ್ ಪದವಿ ಬದಿಗೊತ್ತಿ ಇಡೀ ಜೀವನವನ್ನೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡಿಪಿಟ್ಟಿದ್ದರು. ವಿದೇಶದಲ್ಲಿ ಸೈನ್ಯ ಕಟ್ಟಿ ಬ್ರಿಟಿಷರ ಎದೆ ನಡುಗಿಸಿದ್ದ ಮಹಾನ್ ಹೋರಾಟಗಾರ ಸಮ ಸಮಾಜದ ಕನಸನ್ನು ಕಂಡಿದ್ದರು ಎಂದರು.
ಸಂಘಟನೆ ಸದಸ್ಯ ನಿಂಗರಾಜು, ಸರ್ಕಾರಿ ಮಹಿಳಾ ಕಾಲೇಜಿನ ಅಧ್ಯಾಪಕ ಮಲ್ಲಿಕಾರ್ಜುನ್ ಮಾತನಾಡಿದರು. ಕಾರ್ತಿಕ್, ಮಲ್ಲಿಕಾರ್ಜುನ್, ಮಂಜುನಾಥ್, ವರುಣ್ ಮತ್ತು ವಿದ್ಯಾವಾಹಿನಿ ಶಾಲೆ, ಎಸ್ಜೆಎಂ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.