ಚಿತ್ರದುರ್ಗ: ಶಿಸ್ತು, ಒಗ್ಗಟ್ಟನ್ನು ಕಾಪಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಮುಂದಿನ ಜಿಪಂ ಚುನಾವಣೆ ಎದುರಿಸಲಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು ಆಯ್ಕೆ ವೇಳೆ ಪಕ್ಷದ ಎಲ್ಲ ಸದಸ್ಯರು ಶಿಸ್ತು ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿದ್ದು, ಇದು ಮುಂದುವರಿಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಪಂ ಚುನಾವಣೆಗಾಗಿ ಕ್ಷೇತ್ರ ಮರು ವಿಂಗಡಣೆ ಆಗುತ್ತಿದ್ದು, ಪಕ್ಷದ ಎಲ್ಲ ಸದಸ್ಯರು, ಮುಖಂಡರು, ಕಾರ್ಯಕರ್ತರು ಶಿಸ್ತು ಮತ್ತು ಬಲಿಷ್ಠ ಸಂಘಟನೆಯಿಂದ ಚುನಾವಣೆ ಎದುರಿಸ ಬೇಕಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಕಳೆದುಕೊಂಡಿರುವ ಬಿಜೆಪಿ ಜಿಪಂ ಅಧ್ಯಕ್ಷರ ಆಯ್ಕೆ ಚುನಾವಣೆ ಮುಂದೂಡಲು ಹುನ್ನಾರು ನಡೆಸಿತ್ತು. ಆದರೆ, ಅದರ ವಾಮಮಾರ್ಗ ಫಲಿಸಲಿಲ್ಲ. ಜಿಲ್ಲೆಯಲ್ಲಿ ಆಪರೇಷನ್ ಸಾಧ್ಯವಾಗಲಿಲ್ಲ, ಸಹಜ ಹೆರಿಗೆ ಆಗಿದೆ ಎಂದು ಹೇಳಿದರು.
ವೀಕ್ಷಕ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಬಿಜೆಪಿ ವಾರ್ಮ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸಿತ್ತು. ಸಂಸದ ಎ.ನಾರಾಯಣಸ್ವಾಮಿ ಕೊನೆಗಳಿಗೆವರೆಗೂ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದರು.
ಮುಖಂಡರಾದ ಜಿ.ಎಸ್.ಮಂಜುನಾಥ್, ಹನುಮಲಿ ಷಣ್ಮುಖಪ್ಪ, ಆರ್.ಕೆ.ನಾಯ್ಡು, ಎನ್.ಡಿ.ಕುಮಾರ್, ಯೋಗೇಶ್ಬಾಬು ಇತರರಿದ್ದರು.