ಖಾಲಿ ಇರುವ ಚಿತ್ರರಂಗದ ಹಿರಿಯನ ಸ್ಥಾನವನ್ನು ಮೆಗಾಸ್ಟಾರ್ ಚಿರಂಜೀವಿ ತುಂಬುವುದಕ್ಕೆ ಹೊರಟಿದ್ದಾರಾ?
ಇಂಥದ್ದೊಂದು ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿ ಬಹಳವಾಗಿ ಕೇಳಿ ಬರುತ್ತಿದೆ. ಹಿಂದೆಲ್ಲಾ ಟಾಲಿವುಡ್ನಲ್ಲಿ ಹಲವು ದಿಗ್ಗಜರಿದ್ದರು. ಚಿತ್ರರಂಗದಲ್ಲಿ ಏನೇ ಸಮಸ್ಯೆ ಉಂಟಾದರೂ, ಅವರು ಅದನ್ನು ಪರಿಹರಿಸುತ್ತಿದ್ದರು.
ತುಂಬಾ ಹಿಂದೇನಲ್ಲ, ಇತ್ತೀಚಿನ ಕೆಲವು ವರ್ಷಗಳಲ್ಲೇ ಡಿ. ರಾಮಾನಾಯ್ಡು, ದಾಸರಿ ನಾರಾಯಣ ರಾವ್, ಕೆ. ವಿಶ್ವನಾಥ್ ಮುಂತಾದವರು ಚಿತ್ರರಂಗದಲ್ಲಿ ಹಿರಿಯರ ಸ್ಥಾನದಲ್ಲಿ ನಿಂತು ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಆದರೆ, ಅವರೆಲ್ಲಾ ಈಗ ಬದುಕಿಲ್ಲ. ಇನ್ನೂ ಕೆಲವರು ನೇಪಥ್ಯಕ್ಕೆ ಸರಿದಿದ್ದಾರೆ. ಹಾಗಾಗಿ ಚಿರಂಜೀವಿ ಅವರು ‘ಇಂಡಸ್ಟ್ರಿ ಪೆದ್ದ’ (ಚಿತ್ರರಂಗದ ಹಿರಿಯ)ರಾಗುವುದಕ್ಕೆ ಹೊರಟಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯ ಕೇಳಿ ಬರುತ್ತಿದೆ.
ಇದನ್ನೂ ಓದಿ: ತಮಿಳಿನ ಖ್ಯಾತ ನಟನೊಂದಿಗೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥ!
ಇದಕ್ಕೆ ಸರಿಯಾಗಿ, ಲಾಕ್ಡೌನ್ನಿಂದ ಚಿತ್ರರಂಗದ ಕಾರ್ಮಿಕರು ಕಷ್ಟ ಅನುಭವಿಸುತ್ತಿದ್ದಾಗ, ಚಿರಂಜೀವಿ ಅವರು ಕರೊನಾ ಕ್ರೈಸಿಸ್ ಚಾರಿಟಿ ಎಂಬ ಸಂಸ್ಥೆ ಪ್ರಾರಂಭಿಸಿ, ಹಲವರ ನೆರವಿಗೆ ಧಾವಿಸಿದ್ದರು. ಇನ್ನು ಚಿತ್ರರಂಗದ ಚಟುವಟಿಕೆಗಳು ನಿಂತಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಚಟುವಟಿಕೆಗಳನ್ನು ಪ್ರಾರಂಭಿಸುವುದಕ್ಕೆ ಮನವಿ ಮಾಡಿದ್ದರು. ಈ ಕುರಿತು, ಚಿತ್ರರಂಗದ ಕೆಲವರಿಂದ ಅಪಸ್ವರ ಕೇಳಿ ಬಂದರೂ, ಚಿರಂಜೀವಿ ನೇತೃತ್ವ ವಹಿಸಿ, ಚಿತ್ರೀಕರಣ ಪ್ರಾರಂಭಿಸಿದ್ದರು.
ಇದೀಗ ಚಿರಂಜೀವಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಒಂದು ಕಾಲಕ್ಕೆ ಇಂಡಸ್ಟ್ರಿ ಪೆದ್ದ ಎಂದು ಗುರುತಿಸಿಕೊಂಡಿದ್ದ ನಟ-ನಿರ್ದೇಶಕ ದಾಸರಿ ನಾರಾಯಣ ರಾವ್ ಅವರ ಕೌಟಂಬಿಕ ಕಲಹ ಪರಿಹರಿಸುವುದಕ್ಕೆ ಮುಂದಾಗಿದ್ದಾರೆ. ದಾಸರಿ ನಾರಾಯಣ ರಾವ್ ನಿಧನರಾದ ಮೇಲೆ ಅವರ ಮಕ್ಕಳ ನಡುವೆ ಕೆಲವು ವ್ಯಾಜ್ಯಗಳು ನಡೆಯುತ್ತಿದ್ದು, ಈ ಸಂಬಂಧ ಇತ್ತೀಚೆಗೆ ಮಕ್ಕಳು ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ನೆಪೋಟಿಸಂ: ಹಾಗಂತ ಎಲ್ಲರೂ ಉದ್ಧಾರ ಆದ್ರು ಅಂತ ಹೇಳೋದು ಕಷ್ಟ …
ಯಾವಾಗ ಇದು ದೊಡ್ಡ ಸುದ್ದಿಯಾಯಿತೋ, ಚಿರಂಜೀವಿ ತಕ್ಷಣವೇ ದಾಸರಿ ಅವರ ಮಕ್ಕಳಿಗೆ ಕರೆ ಮಾಡಿ, ಪ್ರಕರಣವನ್ನು ಹಿಂದಕ್ಕೆ ಪಡೆಯುವುದಕ್ಕೆ ಹೇಳಿದರಂತೆ. ಅಷ್ಟೇ ಅಲ್ಲ, ತಾವೇ ಮುಂದೆ ನಿಂತು ಇತ್ಯರ್ಥಗೊಳಿಸುವುದಾಗಿಯೂ ಭರವಸೆ ನೀಡಿದ್ದಾರಂತೆ. ಯಾವಾಗ ಚಿರಂಜೀವಿ ಅವರು ದಾಸಾರಿ ಕೌಟುಂಬಿಕ ಕಲಹದಲ್ಲಿ ಮಧ್ಯಸ್ಥಿಕೆ ವಹಿಸುತ್ತಿರುವ ಸುದ್ದಿಯಾಯಿತೋ, ಆಗಿನಿಂದ ಇದು ಅವರು ‘ಇಂಡಸ್ಟ್ರಿ ಪೆದ್ದ’ ಆಗುತ್ತಿರುವ ಮುನ್ಸೂಚನೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಚಿರಂಜೀವಿ ನಿಜಕ್ಕೂ ‘ಇಂಡಸ್ಟ್ರಿ ಪೆದ್ದ’ ಆಗುವುದಕ್ಕೆ ಹೊರಟಿದ್ದಾರಾ? ಅವರು ಮುಂದಾದರೂ, ಬೇರೆಯವರು ಸುಮ್ಮನಿರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.