ಬೆಂಗಳೂರು: ಚಿರಂಜೀವಿ ಸರ್ಜಾರ ದಿಢೀರ್ ನಿಧನ ಕುಟುಂಬವರ್ಗಕ್ಕೂ, ಅಭಿಮಾನಿಗಳಿಗೂ ಒಂದು ದೊಡ್ಡ ಆಘಾತವಾಗಿದೆ. ಚಿರು ಅಕಾಲಿಕ ಮರಣಕ್ಕೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಚಿರುವಿನ ಆಪ್ತ ಸ್ನೇಹಿತರಲ್ಲಿ ಒಬ್ಬರಾದ ನಟ ಪ್ರಜ್ವಲ್ ದೇವರಾಜ್ಗೆ ಗೆಳೆಯ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಚಿರು ಸೇರಿದಂತೆ ಆಪ್ತ ವಯಲದಲ್ಲಿ ನಡೆಸಿದ ವಾಟ್ಸ್ಆ್ಯಪ್ ಸಂಭಾಷಣೆಯೊಂದರ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿಕೊಂಡಿದ್ದು, ತುಂಬಾ ಮನಕಲಕುವಂತಿದೆ.
ಸ್ನೇಹಿತರೊಂದಿಗೆ ಪ್ರವಾಸ ಮಾಡುವ ಬಯಕೆಯನ್ನು ಚಿರಂಜೀವಿ ಹೊಂದಿದ್ದರು ಎಂಬುದನ್ನು ವಾಟ್ಸ್ಆ್ಯಪ್ ಸ್ಕ್ರೀನ್ ಶಾಟ್ ಬಹಿರಂಗಪಡಿಸಿದೆ. ಈ ಸಂಭಾಷಣೆ ಲಾಕ್ಡೌನ್ ಸಮಯದಲ್ಲಿ ನಡೆದಿದ್ದು, ಚಿರುವಿನ ವಾಟ್ಸ್ಆ್ಯಪ್ ಸಂದೇಶದ ಸಾರ ಹೀಗಿದೆ… ಹಾಯ್ ಫ್ರೆಂಡ್ಸ್ ನಿಮಗೊಂದು ಗೊತ್ತಾ… ನಾನು ನಿಮ್ಮನ್ನು ಪ್ರೀತಿಸುತ್ತೇನೆ ಫ್ರೆಂಡ್ಸ್…. ನಾವು ಒಂದು ವಾರ ಎಲ್ಲಾದರೂ ಪ್ರವಾಸ ಹೋಗೋಣ..ನಾವು ಕಳೆದುಕೊಂಡಿದ್ದನ್ನು ಮತ್ತೆ ಪಡೆಯೋಣ… ನನ್ನನ್ನು ನಂಬಿ ನಿಮ್ಮಗಳ ಜತೆಯಲ್ಲಿರುವುದಕ್ಕಿಂತ ಅತ್ಯಮೂಲ್ಯವಾದದ್ದು ಬೇರೇನಿಲ್ಲ ಎಂದಿದ್ದಾರೆ. ಕೊನೆಯದಾಗಿ “ನಮ್ಮಲ್ಲಿ ಏನಿದೆ ಎಂಬುದು ನಮಗೇ ತಿಳಿದಿಲ್ಲ” ಎನ್ನುವ ಚಿರು ಮಾತು ಎಂತವರನ್ನೂ ಭಾವುಕರನ್ನಾಗಿಸದೇ ಇರದು. ಒಮ್ಮೆ ಮನಸ್ಸಿನಲ್ಲಿ ವಿಧಿಯನ್ನು ಶಪಿಸದೇ ಬಿಡದು. ಇದನ್ನೂ ಓದಿ: ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿದೆ ಉತ್ತರ
ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಸ್ನೇಹಿತರೊಟ್ಟಿಗೆ ಪ್ರವಾಸ ಮಾಡಬೇಕೆಂಬುದು ಚಿರು ಬಯಕೆಯಾಗಿತ್ತು. ಆದರೆ, ಅವರ ಬಯಕೆ ಕೊನೆಗೂ ಈಡೇರಲೇ ಇಲ್ಲ. ಅಷ್ಟರಲ್ಲಾಗಲೇ ಚಿರು ಬದುಕಿನಲ್ಲಿ ಕ್ರೂರ ವಿಧಿ ತನ್ನ ಅಟ್ಟಹಾಸವನ್ನು ಮೆರೆದೇ ಬಿಟ್ಟಿತು. ಚಿರು ಮರಣ ಕಂಡು ಕಣ್ಣೀರಿಟ್ಟು ವಿಧಿಯನ್ನು ಶಪಿಸಿದವರೇ ಹೆಚ್ಚು. ಏಕೆಂದರೆ ಚಿರು ಜೀವನದಲ್ಲಿ ಸಾಧಿಸಬೇಕಾಗಿದ್ದು, ಅನುಭವಿಸಬೇಕಾಗಿದ್ದು ಬಹಳಷ್ಟಿತ್ತು. ಪರಸ್ಪರ ಹಲವು ವರ್ಷಗಳಿಂದ ಪ್ರೀತಿಸಿದ್ದ ಮೇಘನಾ ರಾಜ್ ಜತೆ ಕೇವಲ 2 ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ತಂದೆಯಾಗುವ ನಿರೀಕ್ಷೆಯಲ್ಲಿಯೂ ಇದ್ದರು. ಆದರೆ, ವಿಧಿಯ ತಿರುವ ಬೇರೆಯದ್ದೇ ಆಗಿತ್ತು.
ಇನ್ನೊಂದೆಡೆ ಚಿರು ಸಹೋದರ ಸೂರಜ್ ಸಹ ಇನ್ಸ್ಟಾಗ್ರಾಂನಲ್ಲಿ ಬಾಲ್ಯದ ಹಾಗೂ ಇತ್ತೀಚಿನ ಫೋಟೋಗಳನ್ನು ಅಪ್ಲೋಡ್ ಮಾಡಿ, ಈ ಕ್ಷಣಕ್ಕೂ ಅಣ್ಣ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಸಹೋದರ, ಹೇಳಲು ಮಾತೇ ಬರುತ್ತಿಲ್ಲ ಎಂದು ಭಾವುಕರಾಗಿ ಬರೆದುಕೊಂಡಿದ್ದರು. (ಏಜೆನ್ಸೀಸ್)
ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್ ಸರ್ಜಾ ಸಿಟ್ಟು…