ಬೆಂಗಳೂರು: ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬುದನ್ನು ಈ ಕ್ಷಣವೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿರಂಜೀವಿ ಎಂದು ಹೆಸರಿಟ್ಟುಕೊಂಡು ಬಾಳಿ ಬದುಕಬೇಕಾದ ಜೀವ ಅಕಾಲಿಕವಾಗಿ ಮರಣ ಹೊಂದಿದ್ದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 10 ವರ್ಷಗಳಿಂದ ಪರಿಚಿತರಾಗಿ, ಪ್ರೇಮಾಂಕುರವಾಗಿ 2 ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ಮೇಘನಾ ಮತ್ತು ಚಿರು ಬಾಳಿನಲ್ಲಿ ಇಂಥಾ ಬಿರುಗಾಳಿ ಬರುತ್ತದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ.
ಮೇಘನಾ ಮತ್ತು ಚಿರು ನಡುವಿನ ಪ್ರೀತಿ ಎಷ್ಟರ ಮಟ್ಟಿಗೆ ಇತ್ತು ಎಂಬುದಕ್ಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಕ್ಷಿಯಾಗಿವೆ. ಅಲ್ಲದೆ, ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಒಲವಿನ ಫೋಟೋಗಳು ಕೂಡ ಚಿರು-ಮೇಘನಾ ಪ್ರೀತಿಯನ್ನು ಸಾರುತ್ತಿವೆ. ಇಬ್ಬರ ಪ್ರೀತಿಯ ಸಂಕೇತವಾಗಿ ಇನ್ನೇನು ಕೆಲವೇ ತಿಂಗಳಲ್ಲಿ ಮತ್ತೊಂದು ಜೀವ ಉದಯವಾಗಲಿದೆ. ಆದರೆ, ಕ್ರೂರ ವಿಧಿ ಅದಕ್ಕೂ ಮುಂಚೆಯೇ ಚಿರುವನ್ನು ತನ್ನೊಡಲಿಗೆ ಸೆಳೆದುಕೊಂಡಿರುವುದು ಸಹಿಸಲಾರದ ಸಂಗತಿಯಾಗಿದೆ. ಇದನ್ನೂ ಓದಿ: ಲಕ್ಷಣಗಳಿಲ್ಲದಿದ್ದರೂ ಬಿಎಂಟಿಸಿ ಚಾಲಕನಿಗೆ ಕರೊನಾ: ಸಿಬ್ಬಂದಿ, ಪ್ರಯಾಣಿಕರಲ್ಲಿ ಆತಂಕ!
ಮೇಘನಾ ಚಿರುವನ್ನು ಎಷ್ಟು ಇಷ್ಟಪಡುತ್ತಿದ್ದರು ಎಂಬುದಕ್ಕೆ ಕಳೆದ ವರ್ಷ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದ ಫೋಟೋವೊಂದು ಸಾಕ್ಷಿಯಾಗಿದೆ. ಚಿರು ತನಗೆ ಎಷ್ಟು ಪರ್ಫೆಕ್ಟ್ ಎಂಬುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದ ಮೇಘನಾ, “ಕೆಲವೊಮ್ಮೆ ನನ್ನಷ್ಟಕ್ಕೆ ನಾನೇಕೆ ಆಶ್ಚರ್ಯ ಚಕಿತಳಾಗುತ್ತಿದೆ? ಈ ವ್ಯಕ್ತಿಯೇಕೆ ಅಷ್ಟೊಂದು ಪರಿಪೂರ್ಣ…ನನಗೇಕೆ ತುಂಬಾ ಪರ್ಫೆಕ್ಟ್? ಆನಂತರ ಅಪೂರ್ಣವಾದ ಪಜಲ್ ಸಹ ಪರಿಪೂರ್ಣ ಎಂದೆನಿಸಿತು” ಎಂದು ಬರೆದುಕೊಂಡಿದ್ದಾರೆ.
ಈ ಮೇಲಿನ ಸಾಲು ಚಿರು ಮತ್ತು ಮೇಘನಾ ಪ್ರೀತಿಗೆ ಕನ್ನಡಿ ಹಿಡಿದಂತಿದೆ. ಆದರೆ, ಆ ಕನ್ನಡಿ ಇಂದು ಮೇಘನಾ ಕಣ್ಣೀರಲ್ಲಿ ಮಸುಕಾಗಿದೆ. ಚಿರು ಇಲ್ಲದ ಮೇಘನಾ ಬಾಳಲ್ಲಿ ಹೊಸ ಭರವಸೆ ಮೂಡಬೇಕಿದೆ. ಅಕಾಲಿಕವಾಗಿ ಅಗಲಿದರು ಸಹ ಚಿರು ತಮ್ಮ ನಗುಮುಖದಿಂದಲೇ ಅನೇಕರ ಮನಗೆದ್ದು ಅಜರಾಮರರಾಗಿದ್ದಾರೆ. (ಏಜೆನ್ಸೀಸ್)