ಕುಷ್ಟಗಿ: ಸುಸಜ್ಜಿತ ಕಟ್ಟಡದ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯವಾಗಬೇಕಿದೆ ಎಂದು ವಿಧಾನಸಭೆಯ ವಿರೋಧಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಇದನ್ನೂ ಓದಿ: ಮಕ್ಕಳ ಬೌದ್ಧಿಕ ಬೆಳವಣಿಗೆ ಹೆಚ್ಚಿಸಲಿರುವ ವಿಜ್ಞಾನ
ತಾಲೂಕಿನ ಕಂದಕೂರು ಗ್ರಾಮದ ಸಹಿಪ್ರಾ ಶಾಲೆ ಆವರಣದಲ್ಲಿ ನಿರ್ಮಿಸಿರುವ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಸರ್ಕಾರಿ ಶಾಲೆಗಳಿಗೆ ಪರಿಣಿತ ಶಿಕ್ಷಕರ ನೇಮಕ ಮಾಡಿ ಕಟ್ಟಡ ಇತರ ಮೂಲ ಸೌಲಭ್ಯ ಕಲ್ಪಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ.
ಶಿಕ್ಷಕರು ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಿಣಾಮಕಾರಿ ಬೋಧನೆ ಮಾಡಬೇಕಿದೆ. ಯಾವ ಮಗುವೂ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಿದೆ. ಕ.ಕ. ಪ್ರದೇಶಾಭಿವೃದ್ಧಿ ಯೋಜನೆಯಡಿ ತಲಾ 10ಲಕ್ಷ ರೂ. ಅಂದಾಜು ವೆಚ್ಚದಲ್ಲಿ 5ಕೊಠಡಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿ, ಶಾಲೆಗೆ ಕೊಠಡಿ, ಶೌಚಗೃಹ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಆವಿಷ್ಕಾರ ಯೋಜನೆಯಡಿ 44ಲಕ್ಷ ರೂ. ಅನುದಾನ ಮಂಜೂರು ಆಗಿದೆ. ಶೀಘ್ರವೇ ಕಾಮಗಾರಿ ನಡೆಯಲಿದೆ ಎಂದರು.
ತಾಪಂ ಇಒ ನಿಂಗಪ್ಪ ಮಸಳಿ, ಎಸ್ಡಿಎಂಸಿ ಅಧ್ಯಕ್ಷ ಮಾರುತಿ ಹಲಗಿ, ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಪ್ರಮುಖರಾದ ಅಶೋಕ ಬಳೂಟಗಿ, ವಿಜಯಕುಮಾರ ಹಿರೇಮಠ, ಎಸ್.ವೈ. ಚನ್ನಿ, ಕಂದಕೂರಪ್ಪ ವಾಲ್ಮೀಕಿ, ವೀರೇಶಯ್ಯ ಮಠಪತಿ, ಬಸವರಾಜ ಕಾಮನೂರು, ಮುಖ್ಯಶಿಕ್ಷಕ ಶಿವಾನಂದ ಪಂಪಣ್ಣವರ್ ಇತರರಿದ್ದರು.