ಅಳವಂಡಿ: ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ, ಲಿಂಗ ತಾರತಮ್ಯದಂತಹ ಅನಿಷ್ಟ ಪದ್ದತಿ ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ರೆಹಮತ್ಬೀ ತಿಳಿಸಿದರು.
ಸಮೀಪದ ಬೋಚನಹಳ್ಳಿ ಗ್ರಾಪಂಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಇಲಾಖೆ, ಜಿಪಂ, ತಾಪಂ ಸಂಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆಯಲ್ಲಿ ಮಾತನಾಡಿದರು. ಬಾಲ್ಯ ವಿವಾಹ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಪಾಲಕರು ಹೆಣ್ಣುಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಕಾಳಜಿವಹಿಸಬೇಕು ಎಂದರು.
ಕೆಎಚ್ಪಿಟಿ ಕ್ಷೇತ್ರ ಸಂಯೋಜಕಿ ಸುಷ್ಮಾ ಸಂಗರಡ್ಡಿ ಮಾತನಾಡಿ, ಪಾಲಕರಲ್ಲಿ ಶಿಕ್ಷಣದ ಕೊರತೆಯಿಂದ ಮಕ್ಕಳನ್ನು ಬಾಲ್ಯ ವಿವಾಹಕ್ಕೆ ದೂಡುತ್ತಿದೆ. ಬಾಲ ಕಾರ್ಮಿಕ ಪದ್ದತಿ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಗ್ರಾಪಂ ಕಾರ್ಯದರ್ಶಿ ಅಕ್ಬರ ಮಾತನಾಡಿ, ಶಿಕ್ಷಣ, ಪೊಲೀಸ್ ಇಲಾಖೆ, ಅಂಗನವಾಡಿ, ಮಹಿಳಾ ಸಂಘಗಳ ಸಹಕಾರದಿಂದ ಮಾತ್ರ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯವಾಗುತ್ತದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಸಮಿತಿ ಗಮನಕ್ಕೆ ತರಬೇಕು ಎಂದರು.
ಬಾಲ್ಯ ವಿವಾಹ ನಿಷೇಧ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರಮುಖರಾದ ಚನ್ನಪ್ಪ ಕೊಂಡೇನಹಳ್ಳಿ, ಪಕೀರವ್ವ ಮೇಣೆಗಾರ, ಶಿಕ್ಷಕರಾದ ಉಮಾ ಅಂಗಡಿ, ಸುಮಂಗಲಾ ಪಾಟೀಲ, ಎಮ್ಬಿಕೆ ವನಜಾಕ್ಷಿ ಸಸಿಮಠ, ಗ್ರಂಥಪಾಲಕ ಬಸವರಾಜ ಕಮಲಾಪುರ, ಆಶಾ ಹುಲಿಗೆವ್ವ, ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ ಬೀರಿರು,, ಲಲಿತಾ, ಹನುಮವ್ವ , ದೇವಮ್ಮ, ಹನುಮೇಶ ಬಂಡಿ, ಶ್ರೀದೇವಿ ಬೆಟಗೇರಿ ಇದ್ದರು.