More

    ಬಾಲಕನಿಗೆ ಲೈಂಗಿಕ ದೌರ್ಜನ್ಯ, 10 ವರ್ಷ ಕಠಿಣ ಜೈಲು ಶಿಕ್ಷೆ

    ಕುಂದಾಪುರ: ತಾನು ದಿನಪತ್ರಿಕೆಯೊಂದರ ವರದಿಗಾರನೆಂದು ಹೇಳಿಕೊಂಡು ಬಾಲಕರನ್ನು ಪುಸಲಾಯಿಸಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಂದ್ರ ಕೆ. ಹೆಮ್ಮಾಡಿ ಎಂಬಾತ ಅಪರಾಧಿ ಎಂದು ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಯಾದವ್ ವನಮಾಲಾ ಆನಂದರಾವ್ ತೀರ್ಪು ಪ್ರಕಟಿಸಿದ್ದಾರೆ. ಈತನ ವಿರುದ್ಧ ಒಟ್ಟು 21 ಪೋಕ್ಸೊ ಪ್ರಕರಣ ದಾಖಲಾಗಿದ್ದು, ಒಂದು ಪ್ರಕರಣ ವಿಚಾರಣೆ ಪೂರ್ಣಗೊಂಡಿದ್ದು, 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ.
    ಚಂದ್ರ ಕೆ.ಹೆಮ್ಮಾಡಿ ತಾನು ವರದಿಗಾರನೆಂದು ಹೇಳಿಕೊಂಡು ಬೈಂದೂರು ಭಾಗದ ಗ್ರಾಮೀಣ ಪ್ರದೇಶದ ಬಾಲಕನೊಬ್ಬನಿಗೆ ತಾನು ಪ್ರಾಣಿ, ಪಕ್ಷಿ, ಶಾಲಾ ಕಟ್ಟಡದ ಛಾಯಾಚಿತ್ರ ತೆಗೆಯಲು ತನ್ನ ಜತೆ ಬರುವಂತೆ ಪುಸಲಾಯಿಸಿ ಕರೆದೊಯ್ದು ಆತನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಘಟನೆ ಬಳಿಕ 11 ವರ್ಷದ ಬಾಲಕ ಮಾನಸಿಕವಾಗಿ ತೊಂದರೆಗೀಡಾಗಿದ್ದು ಆತನನ್ನು ಮಣಿಪಾಲ ಮಾನಸಿಕ ತಜ್ಞರ ಬಳಿ ಕೌನ್ಸೆಲಿಂಗ್ ಮಾಡಿಸಿದಾಗ ತನ್ನ ಮೇಲೆ ದೌರ್ಜನ್ಯ ನಡೆದಿರುವುದು ಹೇಳಿಕೊಂಡಿದ್ದ.
    ಈ ಬಗ್ಗೆ ಪಾಲಕರು ಬಾಲಕನನ್ನು ವಿಚಾರಿಸಿದಾಗ ಚಂದ್ರ ಹೆಮ್ಮಾಡಿ ಕುಕೃತ್ಯ ಬೆಳಕಿಗೆ ಬಂದಿದ್ದು ಬೈಂದೂರು ಠಾಣೆಗೆ ದೂರು ನೀಡಲಾಗಿ 2018 ನವೆಂಬರ್ ತಿಂಗಳಿನಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು. ಘಟನೆ ಬೆಳಕಿಗೆ ಬರುತ್ತಲೇ ಹಲವು ಬಾಲಕರು ಪಾಲಕರಿಗೆ ವಿಚಾರ ತಿಳಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈತನ ಮೇಲೆ ಪೋಕ್ಸೋ ಕಾಯ್ದೆಯಡಿ ಬೈಂದೂರು, ಕೊಲ್ಲೂರು ಸಹಿತ ವಿವಿಧ ಠಾಣೆಗಳಲ್ಲಿ 21 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
    ಈ ಪೈಕಿ ಮೊದಲ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಶಿಕ್ಷೆ ವಿಧಿಸಲಾಗಿದೆ. ದಂಡದ 10 ಸಾವಿರದಲ್ಲಿ 5 ಸಾವಿರ ರೂ. ಸರ್ಕಾರಕ್ಕೆ, 5 ಸಾವಿರ ರೂ. ನೊಂದ ಬಾಲಕನಿಗೆ ನೀಡಲು ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಅಂದಿನ ಬೈಂದೂರು ಸಿಪಿಐ ಪರಮೇಶ್ವರ್ ಆರ್. ಗುನಗ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು 36 ಸಾಕ್ಷಿಗಳಲ್ಲಿ ಸಂತ್ರಸ್ತ ಬಾಲಕನ ಸಹಿತ 15 ಮಂದಿ ಸಾಕ್ಷಿ ನೀಡಿದ್ದರು. ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts