ಚಿಕ್ಕಮಗಳೂರು: ಡಿಸಿಸಿ ಬ್ಯಾಂಕ್ ಅಧಿಕಾರ ಸಿಗದೆ ಹತಾಶರಾಗಿರುವವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಬ್ಯಾಂಕ್ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದರು.
ಸಹಕಾರ ತತ್ವದಡಿ ರೈತರ, ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಲಾಗುತ್ತಿದೆ. ಹೊಸ ಆಡಳಿತ ಮಂಡಳಿಗೆ ಎರಡು ವರ್ಷವಾಗಿದೆ. ಅಂದಿನಿಂದ ವಹಿವಾಟಿನಲ್ಲಿ ಸುಧಾರಣೆಯಾಗಿದೆ. ಬೆಳೆ ಸಾಲ, ಮಹಿಳಾ ಸಂಘಗಳಿಗೆ ಸಾಲ, ಮಧ್ಯಮಾವಧಿ ಸಾಲ ವಿತರಣೆ ಹೆಚ್ಚಿಸಲಾಗಿದ್ದು, ಮರುಪಾವತಿಯು ಸಮರ್ಪಕವಾಗಿ ಆಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ 127 ಫ್ಯಾಕ್ಸ್ಗಳು ಹಾಗೂ 27 ಶಾಖೆಗಳು ಲಾಭದಲ್ಲಿ ನಡೆಯುತ್ತಿವೆ. 112 ಸಹಕಾರ ಸಂಘಗಳು ಲಾಭದಲ್ಲಿ ನಡೆಯುತ್ತಿವೆ. ಸಾಲಕ್ಕಾಗಿ ಫ್ಯಾಕ್ಸ್ಗಳಿಂದ ಬಂದಂತಹ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಸಾಲ ನೀಡಲಾಗಿದೆ. ಕಾರಣಾಂತರಗಳಿಂದ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ಸಹಕಾರ ಕಾಯ್ದೆಯಡಿ ಸಭೆಯಲ್ಲಿ ನಿರ್ಣಯ ಕೈಗೊಂಡು ಗಿರೀಶ್ ಚೌಹಾಣ್ ಅವರನ್ನು ತಾತ್ಕಲಿಕವಾಗಿ ಕೋಅಪ್ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
2019-20ನೇ ಸಾಲಿನಲ್ಲಿದ್ದ 843.25 ಕೋಟಿ ರೂ. ಠೇವಣಿ ಈಗ 1276.86 ಕೋಟಿ ರೂ.ಗೆ ಏರಿಕೆಯಾಗಿದೆ. 940.44 ಕೋಟಿ ಕೃಷಿ ಸಾಲ, ಕೃಷಿಯೇತರ ಸಾಲ 466.25 ಕೋಟಿ ರೂ. ವಿತರಿಸಲಾಗಿದೆ. ಪ್ರಸ್ತುತ ಬ್ಯಾಂಕ್ನಿಂದ 1,406.69 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಎನ್ಪಿಎ ಪ್ರಮಾಣವನ್ನು ಶೇ.3.16ಕ್ಕೆ ಇಳಿಕೆ ಮಾಡಲಾಗಿದ್ದು, ಬ್ಯಾಂಕಿಗೆ 17.99 ಕೋಟಿ ರೂ. ಲಾಭ ಬಂದಿದೆ ಎಂದು ಮಾಹಿತಿ ನೀಡಿದರು.
ನಿರ್ದೇಶಕ ಪರಮೇಶ್ವರ್, ಮುಖಂಡರಾದ ಹನುಮಂತಪ್ಪ, ಬಸವರಾಜಪ್ಪ, ನಿರಂಜನ್ ಇದ್ದರು.