ಚಿಕ್ಕಮಗಳೂರು: ಸತತ 17 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದರಿಂದ ಸಂಕಷ್ಟ ಎದುರಾಗಿದೆ. ಕೂಡಲೆ ನ್ಯಾಯ ಒದಗಿಸಲು ಸಹಕರಿಸುವಂತೆ ಆಶಾ ಕಾರ್ಯಕರ್ತೆಯರು ಸಚಿವ ಸಿ.ಟಿ.ರವಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕರೊನಾ ತುರ್ತು ಪರಿಸ್ಥಿತಿಯಲ್ಲಿ ಜೀವವನ್ನು ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಮೂರು ದಿನದಲ್ಲಿ ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸುವುದಾಗಿ ಇತ್ತೀಚೆಗೆ ಭರವಸೆ ನೀಡಿದ್ದರು. ಆರೋಗ್ಯ ಮಂತ್ರಿಗಳೂ ಅದನ್ನೇ ಹೇಳಿದ್ದರು. ಆದರೆ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದರು.
ಕಂಟೇನ್ಮೆಂಟ್ ಜೋನ್ಗಳಿಗೆ ತೆರಳಲು ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಸೌಲಭ್ಯ ಕಲ್ಪಿಸಬೇಕು. ನಮಗೆ ಹೂಮಳೆ ಸುರಿಸುವುದು ಬೇಡ. ಮಾಸಿಕ 12 ಸಾವಿರ ರೂ. ವೇತನ ನೀಡಿದರೆ ಜೀವನಕ್ಕೆ ದಾರಿಯಾಗುತ್ತದೆ. ನಿತ್ಯ ಎಲ್ಲ ಕಾರ್ಯಕರ್ತೆಯರಿಗೆ ದೂರವಾಣಿ ಕರೆಗಳು ಬರುತ್ತಿವೆ. ಇತ್ತ ಮನೆಯಲ್ಲಿ ಇರಲು ಆಗುತ್ತಿಲ್ಲ. ಅತ್ತ ಕೆಲಸಕ್ಕೆ ತೆರಳಲೂ ಆಗದ ಪರಿಸ್ಥಿತಿ ಉಂಟಾಗಿದೆ ಎಂದು ಅಳಲು ತೋಡಿಕೊಂಡರು. ಮನವಿ ಆಲಿಸಿದ ಸಿ.ಟಿ.ರವಿ, ಮುಖ್ಯಮಂತ್ರಿ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.