ದೇವದುರ್ಗ: ಉತ್ತಮ ಇಳುವರಿ ಹಾಗೂ ರಾಸಾಯನಿಕ ಯುಕ್ತ ಆಹಾರ ಪಡೆಯಲು ಮಣ್ಣಿನ ತೇವಾಂಶ ಹಾಗೂ ಫಲವತ್ತತೆ ರಕ್ಷಣೆ ಮಾಡಬೇಕಿದೆ. ಅತಿಯಾದ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮೇಲೆ ಅವಲಂಬನೆ ಆಗುವುದು ಸರಿಯಲ್ಲ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಸ್.ಎನ್.ಭಟ್ ಹೇಳಿದರು.
ಇದನ್ನೂ ಓದಿ: ಅತಿ ರಾಸಾಯನಿಕ ಬಳಕೆ ಆರೋಗ್ಯಕ್ಕೆ ಹಾನಿ -ತೋಟಗಾರಿಕೆ ವಿಜ್ಞಾನಿ ಬಸವನಗೌಡ ಹೇಳಿಕೆ
ತಾಲೂಕಿನ ಕೊಪ್ಪರ ಗ್ರಾಮದಲ್ಲಿ ಕೃಷಿ ವಿಜ್ಞಾನಕೇಂದ್ರ, ಅಖಿಲ ಭಾರತ ಹತ್ತಿ ಸಂಯೋಜಿತ ಯೋಜನೆ ಮುಖ್ಯಕೃಷಿ ಸಂಶೋಧನಾ ಕೇಂದ್ರ, ಹಾಗೂ ಕೇಂದ್ರಿಯ ಹತ್ತಿ ಸಂಶೋಧನೆ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂದ್ರ ಪದ್ಧತಿ ಹತ್ತಿ ಬೆಳೆಯ ಕಿಸಾನ್ ಮೇಳದಲ್ಲಿ ಶುಕ್ರವಾರ ಮಾತನಾಡಿದರು.
ಸಾಂದ್ರ ಪದ್ಧತಿ ಹತ್ತಿ ಬೆಳೆಯಿಂದ ಪೋಷಕಾಂಶಗಳ ನಿರ್ವಹಣೆ ಸಾಧ್ಯ. ಮಣ್ಣಿನ ಫಲವತ್ತತೆ ಕಾಪಾಡಿದರೆ ಮಾತ್ರ ಯಾವುದೇ ಬೆಳೆಯನ್ನಾದರೂ ಬೆಳೆಯಬಹುದು. ಹತ್ತಿಯಲ್ಲಿ ರಸಹೀರುವ ಕೀಟಗಳು, ಗುಲಾಬಿ ಕಾಯಿ ಕೊರಕಗಳ ಹತೋಟಿ ಮಾಡಿದರೆ ಉತ್ತಮ ಬೆಳೆ ಬರಲಿದೆ.
ಸಮಗ್ರಕೀಟ ನಿರ್ವಹಣೆ ಮತ್ತು ಪರಿಸರ ಸ್ನೇಹಿ ವಿಧಾನ ಅನುಸರಿಸಬೇಕು. ಫಾಲ್ಆರ್ಮಿ ವರ್ಮ್, ಗುಲಾಬಿ ಕಾಯಿಕೊರಕ ಮತ್ತು ಹೆಲಿಕೋವರ್ಪಾ ನಿಯಂತ್ರಿಸಲು ಸ್ಪ್ಲಾಟ್ ತಂತ್ರಜ್ಞಾನವನ್ನು ಬಳಸಬೇಕು ಎಂದರು.
ಸಸ್ಯರೋಗಶಾಸ್ತ್ರದ ವಿಜ್ಞಾನಿ ಡಾ.ನೀಲಕಂಠ ಹಿರೇಮನಿ ಮಾತನಾಡಿ, ಹತ್ತಿಯಲ್ಲಿ ರೋಗ ಬಾಧೆ ನಿವಾರಣೆಗೆ ಪರಿಸರ ಸ್ನೇಹಿ ವಿಧಾನಗಳಾದ ಬೇಸಿಗೆಯಲ್ಲಿ ಆಳವಾದ ಉಳುಮೆ, ಜೈವಿಕ ಪರಿಕರಗಳಾದ ಸುಡೂಮೋನಸ್ ಮತ್ತು ಟ್ರೈಕೊರ್ಡಮಾದೊಂದಿಗೆ ಬೀಜೊಪಚಾರ ಮಾಡಬೇಕು. ಇದರಿಂದ ರೋಗ ಹಾವಳಿ ತಗ್ಗಿಸಬಹುದು. ನಾಟಿವಿಧಾನ ಪದ್ಧತಿ ಅನುಸರಿಸಿದರೆ ಉತ್ತಮ ಇಳುವರಿ ಪಡೆಯಬಹುದು ಎಂದರು.
ಕೀಟಶಾಸ್ತ್ರ ವಿಜ್ಞಾನಿ ಡಾ.ಎಸ್.ಜಿ.ಹಂಚಿನಾಳ, ಅಖಿಲ ಭಾರತ ಹತ್ತಿ ಸಂಯೋಜಿತ ಯೋಜನೆ ಮುಖ್ಯಸ್ಥ ಡಾ.ಜಯಪ್ರಕಾಶ ಎಂ.ನಿಡಗುಂದಿ, ಡಾ.ಜಿ.ಎನ್.ಶ್ರೀವಾಣಿ, ಡಾ.ಸಂಗೀತ, ಡಾ.ಬಿ.ಎಸ್.ಉಮೇಶ ಬಾಬು ಇತರರಿದ್ದರು.