ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೈಕಂಬ ಗ್ರಾಮದಲ್ಲಿ ಇಂದು ಚಿರತೆಯದ್ದೇ ಸದ್ದು. ನಾಯಿಯನ್ನ ಭೇಟೆಯಾಡಲು ಬಂದ ಚಿರತೆ ಮನೆಯೊಂದರ ಟಾಯ್ಲೆಟ್ನಲ್ಲಿ ನಾಯಿ ಸಹಿತ ಬಂಧಿಯಾಗಿತ್ತು. ಹೊರ ಹೋಗುವ ದಾರಿ ಕಾಣದೆ ಟಾಯ್ಲೆಟ್ನಲ್ಲೇ ಚಿರತೆ ಮಲಗಿದರೆ, ಅತ್ತ ಚಿರತೆ ಬಾಯಿಂದ ಬದುಕಿದರೆ ಸಾಕಪ್ಪ ಎನ್ನುವ ಭಯದಲ್ಲೇ ನಾಯಿಯೂ ಅಲ್ಲೇ ಮಲಗಿತ್ತು. ಇನ್ನು ಚಿರತೆ ಕಂಡ ಆ ಮನೆಯವರು ಗಾಬರಿಯಿಂದ ಹೊರ ಓಡಿದ್ದರು… ಇದೆಲ್ಲ ನಡೆದ್ದು ರೇಗಪ್ಪ ಎಂಬುವರ ಮನೆಯಲ್ಲಿ.
ಬಿಳಿನೆಲೆ ಕೈಕಂಬ ಮೂಲೆಮನೆ ಎಂಬಲ್ಲಿ ಫೆ.2ರ ರಾತ್ರಿ ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ, ನಾಯಿ ಸಹಿತ ಶೌಚಗೃಹದ ಒಳ ಸೇರಿತ್ತು. ಮನೆಯೊಡತಿ ಜಯಲಕ್ಷ್ಮೀ ಅವರು ಮನೆಯಲ್ಲಿ ಒಬ್ಬರೇ ಇರುವುದರಿಂದ ಪಕ್ಕದ ಮನೆಯಲ್ಲಿ ತಂಗುತ್ತಿದ್ದರು. ರಾತ್ರಿ ನಾಯಿ ಜೋರಾಗಿ ಬೊಗಳುವುದನ್ನು ಗಮನಿಸಿದ ಮನೆಯೊಡತಿಗೆ ರಾತ್ರಿ ಏನೂ ಕಂಡಿರಲಿಲ್ಲ. ಇದನ್ನೂ ಓದಿರಿ Photo Gallery| ಜೈಲಿಂದ ಹೊರಬಂದ ಬಳಿಕ ತುಪ್ಪದ ಬೆಡಗಿ ರಾಗಿಣಿ ಹಂಚಿಕೊಂಡ ಫೋಟೋಗಳಿವು!
ಬುಧವಾರ ಬೆಳಗ್ಗೆ ಮನೆಗೆ ಬಂದಾಗ ಅರ್ಧ ಬಾಗಿಲು ಹಾಕಿದ ಶೌಚಗೃಹದ ಒಳಗಡೆ ನಾಯಿ ಮಲಗಿದ್ದನ್ನ ಕಂಡರು. ಆದರೆ ಚಿರತೆ ಇರುವುದನ್ನು ಗಮನಿಸಿಲ್ಲ. ಅವರು ಶೌಚಗೃಹದ ಚಿಲಕ ಹಾಕಿ ತೆರಳಿದ್ದಾರೆ. ಬಳಿಕ ನೆರೆಮನೆಯವರು ಬಂದಾಗ ಚಿರತೆ ಇರುವುದು ಗಮನಕ್ಕೆ ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರಾದರೂ ಚಿರತೆಯನ್ನ ಹಿಡಿಯುವಲ್ಲಿ ವಿಫಲರಾದರು. ಟಾಯ್ಲೆಟ್ನಲ್ಲಿ ಬಂಧಿಯಾಗಿದ್ದ ಚಿರತೆಯನ್ನ ಬೋನಿಗೆ ಹಾಕಲು ಅರಿವಳಿಕೆ ಮದ್ದು ನೀಡಲು ಯತ್ನಿಸುತ್ತಿರುವ ವೇಳೆ ಶೌಚಗೃಹದ ಗೋಡೆ ಹಾರಿ ಚಿರತೆ ತಪ್ಪಿಸಿಕೊಂಡು ಕಾಡಿನತ್ತ ಓಡಿತು.
ಸರಿಯಾದ ವ್ಯವಸ್ಥೆ ಇಲ್ಲದೆ ಕಾರ್ಯಾಚರಣೆ ನಡೆಸಿದ್ದರಿಂದಲೇ ಚಿರತೆ ಎಸ್ಕೇಪ್ ಆಗಲು ಕಾರಣ. ಮತ್ತೆ ಇಲ್ಲಿಗೆ ಚಿರತೆ ಬಂದರೆ ಗತಿಯೇನು? ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ. ಎಲ್ಲರೂ ನೋಡ ನೋಡುತ್ತಿದ್ದಂತೆ ಚಿರತೆ ಓಡಿದ್ದು, ಅರಣ್ಯ ಇಲಾಖೆಯ ವೈಫಲ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿಯಿಂದ ಬೆಳಗ್ಗಿನವರೆಗೆ ಶೌಚಗೃಹದ ಒಳಗೆ ಚಿರತೆಯೊಂದಿಗೆ ಜೀವಕೈಯಲ್ಲಿ ಹಿಡಿದು ಕುಳಿತಿದ್ದ ನಾಯಿ ಬದುಕಿದೆ ಬಡಜೀವ ಎಂದು ಎದ್ದು ಹೊರಬಂದಿದೆ.
ಸರ್ಕಾರದ ವಿರುದ್ಧ ಸಿಡಿದೆದ್ದ ಧ್ರುವ ಸರ್ಜಾ! ನಟನ ಆ ಪ್ರಶ್ನೆಗೆ ಸಿಎಂ ಉತ್ತರಿಸುವರೇ?