ಸಾಗರ: ಇಡೀ ಪ್ರಪಂಚವೇ ರಾಮನ ಪ್ರತಿಷ್ಠಾಪನೆಗಾಗಿ ಕೌತುಕದಿಂದ ಕಾಯುತ್ತಿತ್ತು. ಎಲ್ಲೆಡೆಯೂ ರಾಮಭಕ್ತರಿದ್ದಾರೆ. ನಮ್ಮ ಸಂಸ್ಕೃತಿ, ಧರ್ಮಕ್ಕೆ ಮೊದಲು ಗೌರವ ನೀಡಬೇಕು. ಇಂತಹ ಐತಿಹಾಸಿಕ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ರಜೆ ಘೋಷಿಸದೆ ರಾಮ ಭಕ್ತರನ್ನು ಅವಕಾಶ ವಂಚಿತರನ್ನಾಗಿ ಮಾಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಸಾಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ದೀಪೋತ್ಸವದಲ್ಲಿ ಮಾತನಾಡಿದರು.
ಕಾಂಗ್ರೆಸ್ನಲ್ಲೂ ರಾಮಭಕ್ತರಿದ್ದಾರೆ. ಅವರೂ ಶ್ರೀರಾಮನ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಕಣ್ತುಂಬಿಕೊAಡಿದ್ದಾರೆ. ಕಪಟ ರಾಮ ಭಕ್ತರು ಯಾವುದ್ಯಾವುದಕ್ಕೋ ರಜೆ ಕೊಡುತ್ತಾರೆ. ಆದರೆ ಇಂತಹ ಪವಿತ್ರ ಕಾರ್ಯಕ್ಕೆ ಸರ್ಕಾರಿ ರಜೆ ಘೋಷಿಸಲಿಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದು ಸೂಕ್ತ ಸಂದರ್ಭದಲ್ಲಿ ಉತ್ತರ ನೀಡುತ್ತಾರೆ ಎಂದರು.
ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸಾಗರದ ಎಲ್ಲ ಬಡಾವಣೆಯಲ್ಲೂ ಸಂಭ್ರಮಾಚರಣೆ ನಡೆಸಲಾಗಿದೆ. ಅನ್ನದಾನ, ಪಾನಕ, ಕೋಸಂಬರಿ, ಸಿಹಿ ವಿತರಣೆ, ವಿಶೇಷ ಪೂಜೆ ಮಾಡಿಸಿ ಸಂಭ್ರಮಿಸಿದರು. ರಾಮಲಲ್ಲಾ ದೇಶದ ಜನರದಲ್ಲಿ ಹೊಸ ಉತ್ಸಾಹ ತಂದಿದೆ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ಶ್ರೀರಾಮ ಪ್ರತಿಷ್ಠಾಪನೆ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ನಗರದ ೩೧ ವಾರ್ಡ್ಗಳಲ್ಲೂ ಮನೆಗಳಿಗೆ ಮಂತ್ರಾಕ್ಷತೆ ತಲುಪಿಸಿದ್ದಾರೆ. ಒಂದು ವಾರಗಳ ಕಾಲ ನಗರವ್ಯಾಪ್ತಿಯ ದೇವಸ್ಥಾನಗಳ ಸ್ವಚ್ಛತೆ ನಡೆಸಲಾಗಿದೆ ಎಂದರು.
ವಿಶೇಷ ರಾಮ ಭಜನೆ ನಡೆಯಿತು. ಪ್ರಮುಖರಾದ ವಿ.ಮಹೇಶ್, ಮಧುರಾ ಶಿವಾನಂದ್, ಪ್ರೇಮಾ ಕಿರಣ್ ಸಿಂಗ್, ಮೈತ್ರಿ ಪಾಟೀಲ್, ರಾಧಾಕೃಷ್ಣ ಬೇಂಗ್ರೆ, ರಾಜೇಂದ್ರ ಪೈ ಇತರರಿದ್ದರು.