ಶಿವಮೊಗ್ಗ: ಆರಂಭಿಕ ಬ್ಯಾಟರ್ ಪ್ರಕಾರ್ ಚತುರ್ವೇದಿ (ಅಜೇಯ 404 ರನ್, 638 ಎಸೆತ, 46 ಬೌಂಡರಿ, 3 ಸಿಕ್ಸರ್) ವಿಶ್ವದಾಖಲೆ ಆಟದ ನೆರವಿನಿಂದ ಆತಿಥೇಯ ಕರ್ನಾಟಕ ತಂಡ 19 ವರ್ಷದೊಳಗಿನ ಕೂಚ್ ಬೆಹಾರ್ ಟ್ರೋಫಿಯಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಸೋಮವಾರ ಮಧ್ಯಾಹ್ನ ಚಹಾ ವಿರಾಮಕ್ಕೂ ಮುನ್ನ ಆತಿಥೇಯ ತಂಡ 8 ವಿಕೆಟ್ ನಷ್ಟಕ್ಕೆ 890 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿದ ಬೆನ್ನಲ್ಲೇ ಅಂಪೈರ್ಗಳು ಪಂದ್ಯಾವನ್ನು ಉಭಯ ನಾಯಕರೊಂದಿಗೆ ಚರ್ಚಿಸಿ ಡ್ರಾ ಎಂದು ತೀರ್ಮಾನಿಸಿದರು. ಮೊದಲ ಇನ್ನಿಂಗ್ಸ್ ಬರೋಬ್ಬರಿ 510 ರನ್ಗಳ ಮುನ್ನಡೆ ಆಧಾರದ ಮೇಲೆ ಕರ್ನಾಟಕ ಚಾಂಪಿಯನ್ ಎಂದು ಘೋಷಿಸಲಾಯಿತು.
ನವುಲೆಯ ಕೆಎಸ್ಸಿಎ ಮೈದಾನದಲ್ಲಿ ನಡೆದ 19 ವರ್ಷದೊಳಗಿನ ಕೂಚ್ ಬೆಹಾರ್ ಟ್ರೋಫಿಯ ಫೈನಲ್ ಪಂದ್ಯದ ನಾಲ್ಕು ಮತ್ತು ಅಂತಿಮ ದಿನದಲ್ಲಿ ನಿರೀಕ್ಷೆಯಂತೆಯೇ ಡ್ರಾ ಮಾಡಿಕೊಂಡಿತು. 638 ಎಸೆತಗಳನ್ನು ಎದುರಿಸಿದ ಪ್ರಕಾರ್ ಚತುರ್ವೇದಿ 46 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ ಹಲವು ದಾಖಲೆಗಳನ್ನು ಪುಡಿಗಟ್ಟುವ ಮೂಲಕ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. 1999ರಲ್ಲಿ ಯುವರಾಜ್ ಸಿಂಗ್ ಫೈನಲ್ ಪಂದ್ಯದಲ್ಲಿ 357 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. 2011ರಲ್ಲಿ ಮಹಾರಾಷ್ಟ್ರ ತಂಡದ ಆರಂಭಿಕ ವಿಜಯ್ ಜೋಲ್ ಅವರು ಅಸ್ಸಾಂ ವಿರುದ್ಧ ಲೀಗ್ ಹಂತದ ಪಂದ್ಯದಲ್ಲಿ ಅಜೇಯ 451 ರನ್ ಗಳಿಸಿರುವುದು 19 ವರ್ಷದೊಳಗಿನ ಕೂಚ್ ಬೆಹಾರ್ ಟ್ರೋಫಿಯ ಗರಿಷ್ಠ ಸಾಧನೆಯಾಗಿದೆ.
ಫೈನಲ್ನಲ್ಲಿ ಗರಿಷ್ಠ ಮೊತ್ತ
ಮುಂಬೈ ವಿರುದ್ಧ ಕರ್ನಾಟಕ ತಂಡ ಫೈನಲ್ ಪಂದ್ಯದಲ್ಲಿ ಇನ್ನಿಂಗ್ಸ್ವೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ಶ್ರೇಯಕ್ಕೂ ಪಾತ್ರವಾಯಿತು. 2011ರಲ್ಲಿ ಲೀಗ್ ಹಂತದ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಮಹಾರಾಷ್ಟ್ರ ತಂಡ 777 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಕರ್ನಾಟಕ ತಂಡ ಆ ದಾಖಲೆಯನ್ನೂ ಪುಡಿಗಟ್ಟಿತು. ಎರಡನೇ ದಿನದಿಂದಲೂ ದಿಟ್ಟ ಬ್ಯಾಂಟಿಂಗ್ ಪ್ರದರ್ಶನ ನೀಡಿದ ಚತುರ್ವೇದಿ ಎದುರಾಳಿ ತಂಡದ ಎಲ್ಲ ಬೌಲರ್ಗಳ ಬೆವರಿಳಿಸಿದರು. ಮುಂಬೈ ತಂಡದ ಮನನ್ ಭಟ್ ಅವರು 9 ಬೌಲರ್ಗಳನ್ನು ಕಣಕ್ಕಿಳಿಸಿದರೂ ಚತುರ್ವೇದಿ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.