ಹೊಸಪೇಟೆ: ಚರಿತ್ರೆ ಕಟ್ಟಲು ಕಾಳಜಿ ಬೇಕು. ಅದನ್ನು ವಿವರಿಸಲು ವಿವೇಚನೆಯೂ ಬೇಕು. ಚರಿತ್ರೆ ಕಟ್ಟುವವರಿಗೆ ಚಾರಿತ್ರ್ಯವೂ ಮುಖ್ಯ. ಆದರೆ ಚರಿತ್ರೆ, ಚಾರಿತ್ರ್ಯವೂ ಇಲ್ಲದ, ಅಧ್ಯಯನಶೀಲರಲ್ಲದ ಕೆಲ ರಾಜಕಾರಣಿಗಳು ಗಾಂಧಿ, ಗೋಡ್ಸೆ, ಶಿವಾಜಿ ಕುರಿತು ನೀಡುವ ಹೇಳಿಕೆಗಳಿಂದ ಚರಿತ್ರೆಯ ಚಾರಿತ್ರ್ಯ ಹರಣವಾಗುತ್ತಿದೆ ಎಂದು ಸಂಸ್ಕೃತಿ ಚಿಂತಕ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಕನ್ನಡ ವಿವಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಮತ್ತು ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ರಾಜ್ಯ ಪತ್ರಗಾರ ಇಲಾಖೆ, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಸಹಯೋಗದಲ್ಲಿ ವಿವಿಯ ಮಂಟಪ ಸಭಾಂಗಣದಲ್ಲಿ ಆಯೋಜಿಸಿರುವ ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್ 29ನೆ ಮಹಾಸಮ್ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ವಿವೇಕ ಅವಿವೇಕಗಳ ನಡುವಿನ ಅಂತರ, ಸತ್ಯ-ಅಸತ್ಯ, ಪ್ರಾಮಾಣಿಕ-ಅಪ್ರಾಮಾಣಿಕ ಹಾಗೂ ನೈತಿಕತೆ ಅನೈತಿಕತೆ ನಡುವಿನ ಅಂತರ ಕಡಿಮೆಯಾಗುತ್ತಿದೆ. ಧರ್ಮಬದ್ಧ ಮತ್ತು ಪಕ್ಷಬದ್ಧ ಚರಿತ್ರಾಕಾರರದಿಂದ ನಿಜ ಚರಿತ್ರೆಗೆ ಧಕ್ಕೆಯಾಗುತ್ತಿದೆ. ಚರಿತ್ರೆಗಳು ಸಿದ್ಧಾಂತ ಸ್ಫೂರ್ತಿ, ಸೃಜನಶೀಲವಾಗಬೇಕೇ ಹೊರತು ಸೆರೆಮನೆಯಾಗಬಾರದು. ಚರಿತ್ರಾಕಾರರು ಧರ್ಮ ಮತ್ತು ಪಕ್ಷಬದ್ಧ ಹೇಳಿಕೆ ನೀಡದೆ ಸಂವಿಧಾನಬದ್ಧ ವ್ಯಾಖ್ಯಾನ ಮಾಡಬೇಕು. ಭೂತ, ವರ್ತಮಾನ ಹಾಗೂ ಭವಿಷ್ಯದ ಕೂಡಿಸುವ ಸತ್ಯದ ಹುಡುಕಾಟದಲ್ಲಿ ಚರಿತ್ರಾಕಾರರು ತೊಡಗಿಸಿಕೊಳ್ಳಬೇಕು ಎಂದರು.
ಕನ್ನಡ ವಿವಿ ಕುಲಪತಿ ಪ್ರೊ.ಸ.ಚಿ.ರಮೇಶ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಈರಣ್ಣ ಪತ್ತಾರ, ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಆರ್.ರಾಜಣ್ಣ, ನಿಕಟಪೂರ್ವ ಸರ್ವಾಧ್ಯಕ್ಷ ಪ್ರೊ.ಎಸ್.ಷಡಕ್ಷರಯ್ಯ ಕುಲಸಚಿವ ಸುಬ್ಬಣ್ಣ ರೈ ಇತರರಿದ್ದರು.