ಚನ್ನರಾಯಪಟ್ಟಣ: ಗರ್ಭದಲ್ಲೇ ಹಲವು ನ್ಯೂನತೆ ಹೊಂದಿದ್ದ ಕರುವನ್ನು ಸತತ 3 ಗಂಟೆಗಳ ಕಾಲ ನಡೆಸಿದ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಪಶು ವೈದ್ಯರು ಯಶಸ್ವಿಯಾಗಿದ್ದಾರೆ.
ಕಾಚೇನಹಳ್ಳಿ ಗ್ರಾಮದ ಮಂಜುಳಮ್ಮ ಎಂಬವರು ಸಾಕಿರುವ ಆರು ವರ್ಷದ ಹಸು ಗರ್ಭ ಧರಿಸಿದ್ದು, ಕರು ಹಾಕುವ ವೇಳೆ ಸಾವು-ಬದುಕಿನೊಂದಿಗೆ ಹೋರಾಡುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕುಂಭೇನಹಳ್ಳಿ ಪಶು ಚಿಕಿತ್ಸಾಲಯದ ವೈದ್ಯ ಡಾ.ಎಂ.ಆರ್.ಪ್ರವೀಣ್ಕುಮಾರ್, ಅಣತಿಯ ಪಶು ವೈದ್ಯಾಧಿಕಾರಿ ಡಾ.ಎಸ್.ಪಿ.ಮಂಜುನಾಥ್ ಮತ್ತು ಸಾತೇನಹಳ್ಳಿಯ ಡಾ.ಜೆ.ಕೆ.ಪ್ರಮೊದ್ ಹಸುವಿನ ಹೊಟ್ಟೆಯಲ್ಲಿ ಅಡ್ಡ ಸಿಲುಕಿದ್ದ ಕರುವನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.
ಗರ್ಭದಲ್ಲಿದ್ದಾಗಲೇ ಕರುವಿಗೆ ಹೊಟ್ಟೆ, ಎದೆ ಸೇರಿ 4 ಕಡೆ ನೀರು ತುಂಬಿಕೊಂಡಿತ್ತು. ಅದನ್ನು ಮೊದಲು ಹೊರ ತೆಗೆದ ವೈದ್ಯರು
ಸಿಸೇರಿಯನ್ ನಡೆಸಿ ಹಸು-ಕರುವನ್ನು ಬದುಕಿಸಿದರು.
ನಂತರ ವಿಜಯವಾಣಿಯೊಂದಿಗೆ ಮಾತನಾಡಿದ ಡಾ.ಎಸ್.ಪಿ.ಮಂಜುನಾಥ್, ಕರುಗಳು ಗರ್ಭದಲ್ಲಿರುವಾಗಲೇ ಹಲವು ಅನುವಂಶೀಯ ನ್ಯೂನತೆ ಹೊಂದಿರುತ್ತವೆ. ಹೀಗಿದ್ದಾಗ ಪ್ರಸವ ಸಂದರ್ಭ ಹಸುಗಳೇ ಮೃತಪಡುವುದು ಹೆಚ್ಚು. ಕರು ಹಾಕುವ ಸಂದರ್ಭ ಹಸುಗಳು ತ್ರಾಸ ಪಡುವುದು ಹೆಚ್ಚಾದ ತಕ್ಷಣ ಹತ್ತಿತರ ಪಶು ವೈದ್ಯಾಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ ಎಂದು ಸಲಹೆ ನೀಡಿದರು.