ಚನ್ನಗಿರಿ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕಂದ ಅಹವಾಲುಗಳು ಸಲ್ಲಿಕೆಯಾದವು. ಅಧಿಕಾರಿಗಳು ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದರು.
ಪಟ್ಟಣದ ಫುಟ್ಬಾತ್ ತೆರವು, ವಡ್ನಾಳ್ ರಾಜಣ್ಣ ಬಡಾವಣೆಯ ಆಶ್ರಯ ಮನೆ ಅವ್ಯವಹಾರ, ಸಂಚಾರ ಅವ್ಯವಸ್ಥೆ, ಸ್ಮಶಾನದ ಸ್ಥಳದ ಸಮಸ್ಯೆ ಮತ್ತಿತರ ದೂರುಗಳು ಕೇಳಿಬಂದವು.
ಡಿಎಸ್ಎಸ್ ಮುಖಂಡ ಚಿತ್ತಲಿಂಗಪ್ಪ ಮಾತನಾಡಿ, ಪಟ್ಟಣದ ವಡ್ನಾಳ್ ರಾಜಣ್ಣ ಬಡಾವಣೆಯ ಆಶ್ರಯ ಮನೆಯಲ್ಲಿ ಫಲಾನುಭವಿಗಳು ವಾಸಿಸದೇ ಬಾಡಿಗೆ ನೀಡುವುದು ಇಲ್ಲವೆ, ಮಾರಾಟ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ನಿಜವಾದ ಫಲಾನಿಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಜೋಳದಾಳ್ ಗ್ರಾಮ ಪಂಚಾಯಿತಿ ಸದಸ್ಯ ಕುಮಾರ ಮಾತನಾಡಿ, ಗ್ರಾಮದಲ್ಲಿ ಶವ ಸಂಸ್ಕಾರ ಮಾಡುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಗ್ರಾಮದಲ್ಲಿ ಯಾರಾದರೂ ಮೃತರಾದರೆ ಎಲ್ಲಿ ಅಂತ್ಯಸಂಸ್ಕಾರ ಮಾಡಬೇಕೆಂಬುದೇ ತಿಳಿಯುವುದಿಲ್ಲ. ಸ್ಮಶಾನಕ್ಕಾಗಿ ಸೂಕ್ತ ಸ್ಥಳಾವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ತಹಸೀಲ್ದಾರ್ ಎನ್.ಜೆ.ನಾಗರಾಜ್ ಮಾತನಾಡಿ, ಆದ್ಯತೆ ನೋಡಿಕೊಂಡು ಸ್ಮಶಾನಕ್ಕೆ ಜಾಗ ನೀಡಲಾಗುವುದು. ಅಕ್ರಮ ಮದ್ಯ ಮಾರಾಟ ಕಂಡುಬಂದರೆ ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಎಂ.ಆರ್.ಪ್ರಕಾಶ್, ಮುಖ್ಯಾಧಿಕಾರಿ ಬಸವರಾಜ್ ಐಗೂರು, ಕ್ಷೇತ್ರ ಶಿಕ್ಷಾಣಾಧಿಕಾರಿ ಕೆ.ಮಂಜುನಾಥ್ ಇತರರಿದ್ದರು.