ದಾವಣಗೆರೆ/ಚನ್ನಗಿರಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾದ ಸೂಳೆಕೆರೆಗೆ ಕೋಡಿ ಬಿದ್ದಿದ್ದು ಜನರನ್ನು ಆಕರ್ಷಿಸುತ್ತಿದೆ.
ಈ ಕೆರೆಯಿಂದ ಚನ್ನಗಿರಿ ತಾಲೂಕಿನ 7 ಸಾವಿರ ಹೆಕ್ಟೇರ್ಗೂ ಹೆಚ್ಚಿನ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಸತತ 3ನೇ ಬಾರಿ ಕೆರೆಗೆ ಕೋಡಿ ಬಿದ್ದಿದೆ.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಗುರುವಾರ ಭೇಟಿ ನೀಡಿ ಕೋಡಿ ಬಿದ್ದುದನ್ನು ವೀಕ್ಷಿಸಿದರು. ಕೆರೆ ತುಂಬಿರುವ ಕಾರಣ ವೀಕ್ಷಣೆಗಾಗಿ ಜನರು ಬಹಳಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಕೆರೆಯ ಬಳಿಗೆ ಹೋಗದಂತೆ ರಕ್ಷಣೆ ನೀಡಬೇಕು ಎಂದು ತಿಳಿಸಿದರು.
ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದ ಮೆಕ್ಕೆಜೋಳ, ರಾಗಿ ಮತ್ತು ಅಡಕೆ ಬೆಳೆಗಳಿಗೆ ಹಾನಿ ಆಗಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದರೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಜನರು ಹೆದರುವುದು ಬೇಡ, ಜಿಲ್ಲಾಡಳಿತ ನಿಮ್ಮ ಜತೆ ಇದೆ ಎಂದರು.
ಆಗಸ್ಟ್ ವರೆಗೆ ವಾಡಿಕೆಗಿಂತ ಅಧಿಕ ಮಳೆ ಸುರಿದ ಪರಿಣಾಮ ಸಾಕಷ್ಟು ಅನಾಹುತ ಆಗಿದೆ. ಜನರನ್ನು ಪ್ರಕೃತಿ ವಿಕೋಪದಿಂದ ರಕ್ಷಣೆ ಮಾಡಲು ಪ್ರತಿ ಗ್ರಾಮದಲ್ಲಿ ಅಧಿಕಾರಿಗಳ ಟಾಸ್ಕ್ಫೋರ್ಸ್ ರಚನೆ ಮಾಡಬೇಕು. ಅನಾಹುತ ನಡೆದ ಕಡೆ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ವರದಿ ಪಡೆದು ಸರ್ಕಾರಕ್ಕೆ ಕಳುಹಿಸಿ ಕೊಡಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಡಾ.ಪಟ್ಟರಾಜಗೌಡ, ನೀರಾವರಿ ಇಲಾಖೆ ಎಇಇ ಗುಡ್ಡಪ್ಪ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ಪ್ರಕಾಶ್ ಇದ್ದರು.