ಚನ್ನಗಿರಿ: ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ನಾಶದ ಜತೆ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಎಸ್ಕೆಡಿಆರ್ಪಿ ಯೋಜನಾಧಿಕಾರಿ ಶ್ರೀಧರ್ ಗೊಂಡ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಬುಳಸಾಗರ ಗ್ರಾಮದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಪದ್ಧತಿ ಕುರಿತು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ಜಮೀನಿಗೆ ರಸಗೊಬ್ಬರ ಬಳಸಿ ಹೆಚ್ಚು ಲಾಭ ನಿರೀಕ್ಷೆ ಮಾಡುತ್ತಾರೆ. ಹಿಂದಿನಿಂದ ಮಾಡಿಕೊಂಡ ಬಂದ ಕೃಷಿ ಪದ್ಧತಿ ಕೈಬಿಡುತ್ತಿದ್ದಾರೆ. ನಿತ್ಯವೂ ಸೇವಿಸುವ ಆಹಾರ ನಮ್ಮ ಆಯುಸ್ಸು ಕಡಿಮೆ ಮಾಡುತ್ತಿದೆ. ಸಾವಯವ ಕೃಷಿ ಪದ್ಧತಿ ಮಾಡಿಕೊಂಡು ಭೂಮಿ ಉಳಿಸಿಕೊಂಡು ಜನರ ಜೀವ ಉಳಿಸುವಂತೆ ಕೆಲಸ ಮಾಡಬೇಕಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ರೈತಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಕೃಷಿ ತಾಂತ್ರಿಕ ತರಬೇತಿ, ಸಹಾಯಧನ, ಅಧ್ಯಯನ ಸ್ವ ಉದ್ಯೋಗಕ್ಕೆ ಪೂರಕವಾದ ತರಬೇತಿ, ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯಕ್ರಮ ಹಾಕಿಕೊಂಡು ಸೇವೆ ಮಾಡುತ್ತಿದೆ ಎಂದರು.
ಸಹಾಯಕ ಕೃಷಿ ಅಧಿಕಾರಿ ಮೆಹತಾಬ್ ಅಲಿ, ಧರ್ಮಸ್ಥಳ ಸಂಸ್ಥೆ ಕೃಷಿ ಅಧಿಕಾರಿ ಹನುಮಂತಪ್ಪ, ನಲ್ಲೂರು ವಲಯದ ಮೇಲ್ವಿಚಾರಕ ಸುರೇಶ್, ಸೇವಾ ಪ್ರತಿನಿಧಿ ಉಮಾದೇವಿ, ಬುಳಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಾವಿದ್ ಅಲಿ ಇದ್ದರು.