ಮೈಸೂರು: ಚಾಮುಂಡಿಬೆಟ್ಟಕ್ಕೆ ರೋಪ್ವೇ ನಿರ್ಮಿಸಬೇಕೆಂಬ ಪ್ರಸ್ತಾವವನ್ನು ಸರ್ಕಾರವು ಶಾಶ್ವತವಾಗಿ ಕೈಬಿಡಬೇಕೆಂದು ಚಾಮುಂಡಿಬೆಟ್ಟ ಉಳಿಸಿ ಸಮಿತಿ ಒತ್ತಾಯಿಸಿದೆ.
ಈ ಯೋಜನೆಗೆ ಸಾರ್ವಜನಿಕರ ವಿರೋಧ ಇದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಜುಲೈ 6ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ರೋಪ್ ವೇ ಯೋಜನೆ ಕೈಬಿಡಲು ನಿರ್ಣಯ ಮಾಡಲಾಗಿದೆ. ಆದಾಗ್ಯೂ, ಪದೆ ಪದೇ ಪ್ರಸ್ತಾವನೆ ಆಗುತ್ತಿರುವ ಈ ಉದ್ದೇಶಿತ ಯೋಜನೆಯನ್ನು ಕೈಬಿಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪರಶುರಾಮೇಗೌಡ ಆಗ್ರಹಿಸಿದರು.
ಚಾಮುಂಡಿ ಬೆಟ್ಟವನ್ನು ಪ್ರವಾಸಿಗರು ಗಿಜಿಗುಡುವ ಪ್ರವಾಸಿ ತಾಣವಾಗಿ, ವ್ಯಾಪಾರಿ ಕೇಂದ್ರ ಮಾಡದೆ, ಭಕ್ತರ ಧಾರ್ಮಿಕ ಕೇಂದ್ರವಾಗಿ ಮಾತ್ರ ಉಳಿಸಿಕೊಳ್ಳಲು ಪ್ರಾಧಿಕಾರ ರಚಿಸಬೇಕು ಎಂದು ಆಗ್ರಹಿಸಿದರು.
ಈ ಪ್ರಾಧಿಕಾರದಲ್ಲಿ ಅರಣ್ಯ ಮತ್ತು ಪರಿಸರ ಖಾತೆಯ ಸಚಿವರು, ಭೂ ವಿಜ್ಞಾನಿ, ಪರಿಸರ ತಜ್ಞ, ಜಲ ತಜ್ಞ, ಪಾರಂಪರಿಕ ತಜ್ಞ, ಸಿವಿಲ್ ಇಂಜಿನಿಯರ್, ವನ್ಯಜೀವಿ ತಜ್ಞ ಇಂತವರು ಸದಸ್ಯರಾಗಿ ಇರಲಿ ಎಂದು ಸರ್ಕಾರಕ್ಕೆ ಮಾಡಿದ್ದ ನಮ್ಮ ಮನವಿಯನ್ನು ಕಡೆಗಣಿಸಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ನಮ್ಮ ಮನವಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ‘ಪ್ರಸಾದ್’ ಯೋಜನೆ ಬದಲಿಗೆ ಗಿಡಗಳನ್ನು ಬೆಳೆಸುವುದು, ಮಳೆ ನೀರು ಕೊಯ್ಲು, ಚರಂಡಿ ನೀರಿನ ಸರಿಯಾದ ನಿರ್ವಹಣೆ ಮತ್ತು ಜಲಮೂಲಗಳ ಸಂರಕ್ಷಣೆ ಮುಂತಾದ ಪರಿಸರ ಸ್ನೇಹಿ ಸುಸ್ಥಿರ ಅಭಿವೃದ್ಧಿ ಮಾಡಲು ಜನಪ್ರತಿನಿಧಿಗಳು ಮತ್ತು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಸಮಿತಿಯ ಸದಸ್ಯೆ ಸುಮಲತಾ, ಲೀಲಾ ಶಿವಕುಮಾರ್, ಹೊರೆಯಾಲ ದೊರೆಸ್ವಾಮಿ, ಪ್ರೊ.ರಂಗರಾಜು, ಪೂರ್ಣಿಮಾ ಇದ್ದರು.