ಚಾಮರಾಜನಗರ: ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾತ್ರ ಬಹುಮುಖ್ಯವಾಗಿದ್ದು, ಪ್ರತಿಯೊಬ್ಬ ಪುರುಷರ ಸಾಧನೆ ಹಿಂದೆ ಮಹಿಳೆಯರು ಇದ್ದಾರೆ ಎಂದು ಸಮತಾ ಸೋಸೈಟಿ ಕಾರ್ಯಕರ್ತೆ ದೀಪಾಬುದ್ಧೆ ಹೇಳಿದರು.
ನಗರದ ಜೋಡಿರಸ್ತೆಯಲ್ಲಿರುವ ಸಂತ ಜೋಸೆಫರ ಮಹಿಳಾ ಅಭಿವೃದ್ದಿ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳನ್ನು ಗೌರವಿಸುವ ಮನೆಯಲ್ಲಿ ದೇವರು ನೆಲೆಸಿರುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆ ಇದ್ದಾಳೆ. ಈ ದೇಶವನ್ನು ಮಹಿಳೆಯರು ಮುನ್ನಡೆಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಅದು ನಿಲ್ಲಬೇಕು. ಪ್ರತಿಯೊಬ್ಬ ಪುರುಷನ ಅಭಿವೃದ್ದಿಗೆ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.
ಮಹಿಳೆಯರ ಅಭಿವೃದ್ದಿಗೆ ಸರ್ಕಾರಗಳು ಬಹಳಷ್ಟು ಯೋಜನೆಗಳನ್ನು ನೀಡಿದೆ. ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವರಿಗೂ ಸಾಮಾನತೆಯನ್ನು ಕಲ್ಪಸಿಕೊಟ್ಟಿದ್ದಾರೆ. ಮಹಿಳೆಯರಿಗೆ ಹಕ್ಕು ಅಧಿಕಾರಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಸಂತಜೋಸೆಫ್ ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ಅನೀತಾ ಡೈಸಿ ಮಾತನಾಡಿ, ಒಂದು ಕುಟುಂಬವನ್ನು ಮೇಲೆತ್ತುವ ಜವಾಬ್ದಾರಿ ಹೆಣ್ಣು ಮಗಳಿಗಿರುತ್ತದೆ. ಭೂಮಿತಾಯಿ ಎಷ್ಟು ಭಾರವನ್ನು ಹೊರುತ್ತಾಳೋ ಅದೇ ರೀತಿ ಕುಂಟುಂಬದ ಭಾರವನ್ನು ಹೆಣ್ಣು ಮಕ್ಕಳು ಹೊರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮರಿಯಾ ಜೋಸ್, ತಾಳವಾಡಿ ಒ.ಡಿ.ಪಿ ಸಂಸ್ಥೆಯ ನಿವೃತ್ತ ಅಧಿಕಾರಿ ರೆಜಿನಾ ರೋಸಿ ಸುಧಾಮಣಿ, ಮಹದೇವಮ್ಮ, ಸುನಂದಾ ಹಾಗೂ ಇತರರು ಉಪಸ್ಥಿತರಿದ್ದರು.