ಚಳ್ಳಕೆರೆ: ಲಾಕ್ಡೌನ್ ಜಾರಿಯಾಗಿರುವ ಪರಿಣಾಮ ಸವಿತಾ ಸಮಾಜ ವೃತ್ತಿಗೆ ತೊಂದರೆ ಆಗಿರುವುದಕ್ಕೆ ಧೃತಿಗೆಡಬಾರದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಜನತಾ ಕಾಲನಿಯಲ್ಲಿ ಶನಿವಾರ ತಾಲೂಕು ಸವಿತಾ ಸಮಾಜದ ವತಿಯಿಂದ ನಗರ ಮತ್ತು ಗ್ರಾಮೀಣ ಭಾಗದ ಸವಿತಾ ಸಮಾಜದ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೊನಾ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹಕಾರ ಮಾಡಬೇಕು. ಸ್ವಲ್ಪ ದಿನಗಳ ಕಷ್ಟದ ಪರಿಸ್ಥಿತಿಗೆ ಎದೆಗುಂದದೇ ಪರಸ್ಪರ ಸಹಕಾರದಿಂದ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಹೇಳಿದರು.
ಸವಿತಾ ಸಮಾಜದ ಜಿಲ್ಲಾ ಸಂಚಾಲಕ ಸಂಪಿಗೆ ಟಿ.ತಿಪ್ಪೇಸ್ವಾಮಿ ಮಾತನಾಡಿ, ಸವಿತಾ ಸಮುದಾಯಕ್ಕೆ ಅರ್ಥಿಕ ಬಲ ಇಲ್ಲ. ವೃತ್ತಿ ಸ್ಥಗಿತದಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರ ತಲಾ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸವಿತಾ ಸಮಾಜದ ಜಿಲ್ಲಾ ಪ್ರಧಾ ಕಾರ್ಯದರ್ಶಿ ಎನ್.ಡಿ.ಕುಮಾರ್, ತಾಲೂಕಾಧ್ಯಕ್ಷ ಎಸ್.ರಾಜು, ಪ್ರ.ಕಾರ್ಯದರ್ಶಿ ಶಿವರಾಮ್, ಖಜಾಂಚಿ ಎಚ್. ಪ್ರಕಾಶ್, ಎನ್.ಶಿವಕುಮಾರ್, ಶ್ರೀನಿವಾಸ್ ಮತ್ತಿತರರು ಇದ್ದರು.