ಚಳ್ಳಕೆರೆ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡಿಕೊಂಡ ಬಳಿಕ ಪಕ್ಷ ಸಂಘಟನಾ ಕಾರ್ಯ ಆರಂಭವಾಗಲಿದೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಲಾಕ್ಡೌನ್ ಪರಿಸ್ಥಿತಿಗೆ ಸಾಮಾನ್ಯಜನರ ಬದುಕು ಕಷ್ಟವಾಗಿದೆ. ಜನಸಾಮಾನ್ಯರಿಗೆ ಸ್ಪಂದಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಘೋಷಿಸಿದ ವಿಶೇಷ ಪ್ಯಾಕೇಜ್ ಜಾರಿಯಾಗಲು ಸರಿಯಾದ ಮಾರ್ಗಸೂಚಿ ಮಾಡಿಲ್ಲ. ಈ ಮೂಲಕ ಜನರನ್ನು ವಂಚಿಸುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ ಎಂದು ದೂರಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಬಿ.ಯೋಗೇಶ್ಬಾಬು ಮಾತನಾಡಿ, ಮೊಳಕಾಲ್ಮೂರು ಕ್ಷೇತ್ರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮೀಣ ಭಾಗದ ಜನತೆ ಸಮಸ್ಯೆ ಹೇಳಿಕೊಳ್ಳಲು ಕ್ಷೇತ್ರದ ಶಾಸಕರು ಸಿಗುತ್ತಿಲ್ಲ ಎಂದು ಆರೋಪಿಸಿದರು.
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ, ಸಾಮಾಜಿಕ ಚಿಂತನೆ ಇರುವ ಕಾಂಗ್ರೆಸ್ ಪಕ್ಷ ತನ್ನ ಶಕ್ತಿ ಕಳೆದುಕೊಂಡಿಲ್ಲ. ಬರುವ ಸ್ಥಳೀಯ ಚುನಾವಣೆಗಳಲ್ಲಿ ಸಂಪೂರ್ಣ ಬೆಂಬಲ ಪಡೆದುಕೊಂಡು ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲಿದೆ ಎಂದರು.
ತಾಪಂ ಸದಸ್ಯ ತಿಮ್ಮಾರೆಡ್ಡಿ, ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ಪೀರ್, ಮುಖಂಡರಾದ ಅಜ್ಜಣ್ಣ, ಸಂಪತ್ಕುಮಾರ್, ಎಲ್ಐಸಿ ತಿಪ್ಪೇಸ್ವಾಮಿ, ಓಬಣ್ಣ, ಜಗನ್ನಾಥ, ಹರೀಶ್, ದಾದಾಪೀರ್, ಜಿ.ಎನ್. ಜಗದೀಶ್, ರಾಜಣ್ಣ, ಶಿವಲಿಂಗಪ್ಪ ಮತ್ತಿತರರು ಇದ್ದರು.