More

    ರೈತರ ಹೋರಾಟಕ್ಕೆ ಮಣಿದ ಸೆಸ್ಕ್


    ತಿ.ನರಸೀಪುರ : ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಸುಜ್ಜಲೂರು ಗ್ರಾಮಸ್ಥರು ಸೆಸ್ಕ್ ಮುಂದೆ ಶನಿವಾರ ಪ್ರತಿಭಟನೆ ನಡೆಸಿ ಜೂನಿಯರ್ ಇಂಜಿನಿಯರ್ ಸಿ.ಗೀತಾ ಅವರನ್ನು ತರಾಟೆಗೆ ತೆಗೆದುಕೊಂಡರು.


    ತಾಲೂಕಿನ ಸುಜ್ಜಲೂರು ಗ್ರಾಮಸ್ಥರು ಸೆಸ್ಕ್ ಕಚೇರಿ ಎದುರು ಜಮಾಯಿಸಿ ಸಮರ್ಪಕವಾಗಿ ವಿದ್ಯುತ್ ಪೂರೈಸದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


    ಗ್ರಾಮದಲ್ಲಿ ರೈತರು ಅರಿಶಿಣ, ಕಬ್ಬು, ಮಂಗಳೂರು ಸವತೆಕಾಯಿ ಬೆಳೆಯುತ್ತಿದ್ದು, ನಾಲೆಯಲ್ಲಿ ನೀರಿಲ್ಲದ ಕಾರಣ ಪಂಪ್‌ಸೆಟ್‌ಗಳ ಆಶ್ರಯದಲ್ಲಿ ಬೆಳೆಗಳನ್ನು ಬೆಳೆಯಬೇಕಾಗಿದೆ. ಆದರೆ ಅಧಿಕಾರಿಗಳು ದಿನಕ್ಕೆ ಕೇವಲ ಎರಡು ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.


    ವಾಟಾಳು ಗ್ರಾಮಗಳಿಗೆ ಸರಿದೂಗಿಸಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಹಾಗಾಗಿ ಸಮಸ್ಯೆ ಎದುರಾಗಿದೆ. ಮಳೆ ಬಂದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಅಲ್ಲಿಯ ತನಕ ಸರತಿ ಮೇರೆಗೆ ವಿದ್ಯುತ್ ಹಂಚಿಕೆ ಮಾಡಲಾಗುತ್ತದೆ ಎಂದು ಇಂಜಿನಿಯರ್ ಗೀತಾ ರೈತರ ಮನವೊಲಿಸಲು ಮುಂದಾದರು.


    ಆದರೆ ಇದನು ್ನಒಪ್ಪದ ಗ್ರಾಮಸ್ಥರು ಮೊದಲೆಲ್ಲಾ ಮೂಗೂರು ವಿಭಾಗದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಬೆಳಗ್ಗೆ 5 ಹಾಗೂ ರಾತ್ರಿ 2 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಆಗ ಯಾವುದೇ ಸಮಸ್ಯೆ ಇರಲಿಲ್ಲ. ಈಗ ತಿ.ನರಸೀಪುರ ವಿಭಾಗದಿಂದ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಎರಡು ಗಂಟೆಗಳ ಕಾಲ ಮಾತ್ರವೇ ವಿದ್ಯುತ್ ಸರಬರಾಜಾಗುತ್ತಿದೆ. ಕೆಲವೊಮ್ಮೆ ಮೋಟಾರ್ ಚಾಲನೆ ಮಾಡಲು ಸಾಧ್ಯವಾಗದಷ್ಟು ವಿದ್ಯುತ್ ಸರಬರಾಜಾಗುತ್ತಿಲ್ಲ. ಹಾಗಾಗಿ ನಮಗೆ ಮತ್ತೆ ಮೂಗೂರು ವಿಭಾಗದಿಂದಲೇ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.


    ಈ ನಡುವೆ ಸುಜ್ಜಲೂರು ಗ್ರಾಮ ಹಾಗೂ ವಾಟಾಳು, ಹೊಸೂರುಹುಂಡಿ ಗ್ರಾಮಕ್ಕೆ ದಿನ ಬಿಟ್ಟು ದಿನ ವಿದ್ಯುತ್ ನೀಡಲು ಗ್ರಾಮಸ್ಥರು ಸಲಹೆ ನೀಡಿದರು. ಆದರೆ ಅದಕ್ಕೂ ಕೆಲ ರೈತರು ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಈ ಹಿಂದೆ ಮೂಗೂರು ವಿಭಾಗದಿಂದ ನೀಡಲಾಗುತ್ತಿದ್ದ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡಬೇಕೆಂದು ರೈತರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮಣಿದ ಅಧಿಕಾರಿಗಳು ಇಂದು ಸಂಜೆಯಿಂದಲೇ ಮೂಗೂರು ವಿದ್ಯುತ್ ವಿಭಾಗದಿಂದಲೇ ಸುಜ್ಜಲೂರು ಭಾಗದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡುವುದಾಗಿ ಭರವಸೆ ನೀಡಿದರು. ಆದರೆ ಈ ನಿರ್ಧಾರದಿಂದ ವಾಟಾಳು ಮತ್ತು ಹೊಸೂರುಹುಂಡಿ ಗ್ರಾಮದ ರೈತರ ಪಂಪ್ ಸೆಟ್‌ಗಳಿಗೆ ತೊಂದರೆ ಉಂಟಾಗಲಿದೆ ಎಂದು ತಿಳಿಸಿದರು.


    ಗ್ರಾಪಂ ಸದಸ್ಯ ರಘು, ಶಿವಸ್ವಾಮಿ, ರಾಜೇಂದ್ರ, ಗುರು ಬಸವನಾಯಕ, ಬಸವರಾಜು, ಪ್ರದೀಪ್, ಮಹದೇವಪ್ಪ, ಗುರುಸ್ವಾಮಿ, ಮಹೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts