ಹೈದರಾಬಾದ್: ಪ್ರವಾಹದ ನೀರಿನಲ್ಲಿ ಕಾರು ಸಿಲುಕಿ ತಂದೆ-ಮಗಳು ಕೊಚ್ಚಿ ಹೋಗಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.
ಆಂಧ್ರ ಮತ್ತು ತೆಲಂಗಾಣದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ಅನೇಕ ಆಸ್ತಿ ನಷ್ಟದೊಂದಿಗೆ ಪ್ರಾಣಿ ಹಾನಿಯೂ ಸಂಭವಿಸಿದೆ. ಕಾಲನಿಗಳು, ಗ್ರಾಮಗಳು, ಬೆಳೆಗಳು ಸಂಪೂರ್ಣ ಜಲಾವೃತಗೊಂಡರೆ, ರಸ್ತೆಗಳೆಲ್ಲ ನದಿಯಂತಾಗಿ ಜನಜೀವನವೇ ಅಸ್ತವ್ಯಸ್ತವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವರು ಹುಚ್ಚು ಧೈರ್ಯ ಮಾಡಿ ತೊಂದರೆಗೆ ಸಿಲುಕುತ್ತಿರುವ ಅನೇಕ ಘಟನೆಗಳು ಸಹ ವರದಿಯಾಗುತ್ತಿದೆ.
ಇತ್ತೀಚೆಗೆ ಅಂಥದ್ದೆ ಒಂದು ಘಟನೆ ವರದಿಯಾಗಿದ್ದು, ಮದುವೆ ಸಮಾರಂಭ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ತಂದೆ-ಮಗಳು ಪ್ರವಾಹದ ನೀರಿನಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಘಟನೆಯಲ್ಲಿ ಮಗಳು ಮೃತಪಟ್ಟಿದ್ದು ಆಕೆಯ ಮೃತದೇಹ ಕಲಿಕಿರಿ ಚಿತ್ತೂರಿನ ಕೆರೆಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಗ್ರಾ.ಪಂ. ಚುನಾವಣೆಗೆ ಕೋರಿದ ಅರ್ಜಿ ವಿಚಾರಣೆ ಪೂರ್ಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಘಟನೆಯ ವಿವರಣೆಗೆ ಬರುವುದಾದರೆ, ಪೆನುಮುರು ಮೂಲದ ಒಂದೇ ಕುಟುಂಬದ ಐವರು ಬುಧವಾರ ಮದುವೆ ಸಮಾರಂಭದಲ್ಲಿ ಪಾಲ್ಗೊಳಲು ಕಾರಿನಲ್ಲಿ ತೆರಳಿದ್ದರು. ಕಿರಣ್ ಕುಮಾರ್ ರೆಡ್ಡಿ ಎಂಬುವರು ಕಾರು ಚಾಲನೆ ಮಾಡುತ್ತಿದ್ದರು. ಉಳಿದಂತೆ ಪ್ರತಾಪ್, ಪತ್ನಿ ಶ್ಯಾಮಲಾ, ಮಗಳು ಸಾಯಿ ವಿನಿತಾ ಮತ್ತು ಕಸಿನ್ ಚಿಂಪಪ್ಪು ಕಾರಿನಲ್ಲಿದ್ದರು. ಮದುವೆ ಮುಗಿಸಿ ಅದೇ ದಿನ ಮಧ್ಯರಾತ್ರಿ ಮನೆಗೆ ಮರಳುತ್ತಿದ್ದರು. ಈ ವೇಳೆ ಕೊಂಡಯ್ಯಗರಿಪಲ್ಲೆಯಲ್ಲಿರುವ ಕರೆಯೊಂದನ್ನು ದಾಟಲು ಯತ್ನಿಸುವಾಗ ದುರ್ಘಟನೆ ಸಂಭವಿಸಿದೆ.
ರಾತ್ರಿಯಾದ್ದರಿಂದ ಚಾಲಕ ಕಿರಣ್ ನೀರಿನ ಹರಿವನ್ನು ಗಮನಿಸಿಲ್ಲ. ಇದ್ದಕ್ಕಿದ್ದಂತೆ ಕಾರು ಹಳ್ಳದಲ್ಲಿ ಸಿಲುಕಿದೆ. ಕಾರು ಸ್ಟಾರ್ಟ್ ಆಗದಿದ್ದಾಗ ಕಿರಣ್, ಪ್ರತಾಪ್ ಮತ್ತು ಶ್ಯಮಲಾ ಎಸ್ಕೇಪ್ ಆಗಿದ್ದಾರೆ. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಗಳನ್ನು ಉಳಿಸಿಕೊಳ್ಳಲು ಪ್ರತಾಪ್ ಯತ್ನಿಸಿದ್ದಾರೆ. ಆದರೆ, ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮಗಳ ಶವ ಪತ್ತೆಯಾಗಿದ್ದು, ತಂದೆಯ ಸುಳಿವು ಲಭ್ಯವಾಗಿಲ್ಲ. (ಏಜೆನ್ಸೀಸ್)