ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದಲ್ಲಿ ಆಡುವ ಸಲುವಾಗಿ ಶನಿವಾರ ಯುಎಇಗೆ ವಿಮಾನ ಏರಲಿದೆ. ಆದರೆ ಅರಬ್ ನಾಡಿನಲ್ಲಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
2019-2020ರ ಆವೃತ್ತಿಯಲ್ಲಿ ಡೆಲ್ಲಿ ತಂಡವನ್ನು ಮುಂಬೈ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಮುನ್ನಡೆಸಿದ್ದರು. ಈ ಪೈಕಿ 2020ರ ಆವೃತ್ತಿಯಲ್ಲಿ ಡೆಲ್ಲಿ ತಂಡ ರನ್ನರ್ಅಪ್ ಕೂಡ ಆಗಿತ್ತು. ಆದರೆ ಈ ಬಾರಿ ಐಪಿಎಲ್ಗೆ ಮುನ್ನ ಗಾಯಗೊಂಡಿದ್ದ ಶ್ರೇಯಸ್ ಟೂರ್ನಿಯಿಂದ ಹೊರಬಿದ್ದಿದ್ದರು. ಇದರಿಂದಾಗಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ಗೆ ನಾಯಕತ್ವ ವಹಿಸಲಾಗಿತ್ತು. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಪಂತ್, 8 ಪಂದ್ಯಗಳಲ್ಲಿ 6ರಲ್ಲಿ ಗೆಲ್ಲಿಸಿ, ಟೂರ್ನಿ ಸ್ಥಗಿತಗೊಂಡ ವೇಳೆ ತಂಡವನ್ನು ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ನಿಲ್ಲಿಸಿದ್ದರು. ಇದರಿಂದಾಗಿ ಈಗ ರಿಷಭ್ ಪಂತ್ ಅವರನ್ನೇ ನಾಯಕರಾಗಿ ಮುಂದುವರಿಸಬೇಕೇ ಅಥವಾ ಟೂರ್ನಿಯ 2ನೇ ಭಾಗಕ್ಕೆ ಫಿಟ್ ಆಗಿ ಮರಳುತ್ತಿರುವ ಶ್ರೇಯಸ್ ಅಯ್ಯರ್ ಅವರಿಗೆ ಮತ್ತೆ ನಾಯಕತ್ವ ವಹಿಸಬೇಕೇ ಎಂಬ ಗೊಂದಲ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕಾಡುತ್ತಿದೆ.
ಶನಿವಾರ ಯುಎಇಗೆ ತೆರಳಿದ ಬಳಿಕ ಒಂದು ವಾರ ಕ್ವಾರಂಟೈನ್ಗೆ ಒಳಗಾಗಲಿರುವ ಡೆಲ್ಲಿ ತಂಡ, ನಂತರ ಪೂರ್ವಸಿದ್ಧತಾ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ಶ್ರೇಯಸ್ ಅಯ್ಯರ್ ಈಗಾಗಲೆ ಯುಎಇಯಲ್ಲಿದ್ದರೆ, ರಿಷಭ್ ಪಂತ್ ಭಾರತ ಟೆಸ್ಟ್ ತಂಡದ ಜತೆಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಪಂತ್ ಮತ್ತು ಶ್ರೇಯಸ್ ಅವರಲ್ಲಿ ಈ ಬಾರಿ ಯಾರಿಗೆ ನಾಯಕತ್ವ ವಹಿಸುವುದು ಎಂಬ ಬಗ್ಗೆ ಇನ್ನೂ ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅಧಿಕಾರಿ ತಿಳಿಸಿದ್ದಾರೆ.
.@ShreyasIyer15 is back to doing magic on the field 🪄🎩
P.S. Guess where the ball landed at the end of the video 💥 #YehHaiNayiDilli #IPL2021 pic.twitter.com/GjM7f2ZneH
— Delhi Capitals (@DelhiCapitals) August 19, 2021
ಡೆಲ್ಲಿ ತಂಡ ಸೆಪ್ಟೆಂಬರ್ 22ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡುವ ಮೂಲಕ ದುಬೈನಲ್ಲಿ 2ನೇ ಭಾಗದ ಟೂರ್ನಿಯ ಅಭಿಯಾನ ಆರಂಭಿಸಲಿದೆ.
ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?