ಕುಶಾಲನಗರ: ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ನೀಗಿಸಲು ರಕ್ತದಾನ ಶಿಬಿರ ನಡೆಸುವುದು ಅವಶ್ಯ. ರಕ್ತವಿಲ್ಲದೆ ಜೀವ ಉಳಿಸಲು ಸಾಧ್ಯವಿಲ್ಲ ಎಂದು ಮೈಸೂರಿನ ಸೇಂಟ್ ಜೋಸೆಫ್ ಆಸ್ಪತ್ರೆಯ ವೈದ್ಯ ಡಾ.ಮಹಮ್ಮದ್ ಅಭಿಪ್ರಾಯಪಟ್ಟರು.
ಕುಶಾಲನಗರದ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜದ ವತಿಯಿಂದ ನಟ ಡಾ.ಪುನೀತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ಗೌಡ ಸಮಾಜದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ದಾನಗಳಲ್ಲೇ ಶ್ರೇಷ್ಠ ದಾನ ರಕ್ತದಾನ. ಅಂತಹ ಮಹತ್ವದ ಕಾರ್ಯಕ್ಕೆ ವೇದಿಕೆ ಸೃಷ್ಟಿ ಮಾಡಿ ಜನರಲ್ಲಿ ರಕ್ತದಾನದ ಜಾಗೃತಿ ಮೂಡಿಸಿ ರಕ್ತದ ಕೊರತೆ ನೀಗಿಸುವಲ್ಲಿ ಲಯನ್ಸ್ ಮತ್ತು ಗೌಡ ಸಮಾಜ ಕಳೆದ 3 ವರ್ಷಗಳಿಂದ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.
ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಗಣಿಪ್ರಸಾದ್ ಕಾರ್ಯಕ್ರಮದ ಉದ್ಘಾಟಿಸಿದರು. ಶಿಬಿರದಲ್ಲಿ 50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಲಯನ್ಸ್ ಕ್ಲಬ್ನ ಅಧ್ಯಕ್ಷ ಸುಮನ್ ಬಾಲಚಂದರ್ ಅಧ್ಯಕ್ಷತೆ ವಹಿಸಿದ್ದರು. ಗೌಡ ಸಮಾಜದ ಉಪಾಧ್ಯಕ್ಷರಾದ ಕಾಶಿ ಪೂವಯ್ಯ, ದೊರೆ ಗಣಪತಿ, ನಿರ್ದೇಶಕ ಹೇಮಂತಕುಮಾರ್, ಲಯನ್ಸ್ ಕ್ಲಬ್ನ ಕಾರ್ಯದರ್ಶಿ ರಾಜಶೇಖರ್, ಖಜಾಂಚಿ ನೀತಿನ್ ಗುಪ್ತ, ನಿರ್ದೇಶಕ ಅರವಿಂದ್, ನವೀನ್, ಸೇಂಟ್ ಜೋಸೆಫ್ ಆಸ್ಪತ್ರೆಯ ಸಿಬ್ಬಂದಿ ಇದ್ದರು.