ಬೆಂಗಳೂರು: ಖಾತೆ ಹಂಚಿಕೆ ಬಗ್ಗೆ ಪಿಕ್ಚರ್ ಅಭಿ ಬಾಕಿ ಹೈ ಎಂದು ಹೇಳೋ ಮೂಲಕ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆನಂದ್ ಸಿಂಗ್, ತಮ್ಮ ಅಸಮಾಧಾನ ಇನ್ನೂ ಮುಗಿದಿಲ್ಲ ಎಂದಿದ್ದಾರೆ. ಈ ಮುನ್ನ ಅಸಮಾಧಾನ ಬಗೆಹರಿದಿದೆ, ಸಿಂಗ್ ಧ್ವಜಾರೋಹಣ ಮಾಡ್ತಾರೆ ಎಂದು ಸಿಎಂ ಬೊಮ್ಮಯಿ ಹೇಳಿದ್ದರು. ಆದರೆ ನಿನ್ನೆಯ ಧ್ವಜಾರೋಹಣದ ಬಳಿಕ ಮತ್ತೆ ಆನಂದ್ ಸಿಂಗ್ ಕ್ಯಾತೆ ತೆಗೆದಿದ್ದಾರೆ.
ಅಷ್ಟೇ ಅಲ್ಲದೇ, ಮತ್ತೊಬ್ಬ ಸಚಿವ ಎಂಟಿಬಿ ನಾಗರಾಜ್ ಸಹ ಅಸಮಾಧಾನ ಹೊಂದಿದ್ದಾರೆ. ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲದರ ಬಗ್ಗೆ ಇದೇ ವಾರದ ಕೊನೆಯಲ್ಲಿ ಸಿಎಂ ಬೊಮ್ಮಾಯಿ ಅವರು ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ವಿಚ್ಛೇದನ ಕೊಟ್ಟ ಮೇಲೆ ಮತ್ತೆ ಒಂದಾಗಲು ಮದ್ವೆಯಾಗಲೇಬೇಕಾ?
ಈ ನಡುವೆ ಆಕಾಂಕ್ಷಿಗಳು ಹಾಗೂ ಅಸಮಾಧಾನಿತರಿಗೆ ದೆಹಲಿಗೆ ಬರದಂತೆ ಪಕ್ಷದ ವರಿಷ್ಠರು ತಾಕೀತು ಮಾಡಿದ್ದಾರೆ. ಹೀಗಾಗಿ ದೆಹಲಿಗೆ ಹೋಗುವ ಪ್ಲಾನ್ಗೆ ಆನಂದ್ ಸಿಂಗ್ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಬೊಮ್ಮಾಯಿ ಅವರು ದೆಹಲಿಗೆ ಹೋಗಲು ಮತ್ತೊಂದು ಕಾರಣವಿದೆ. ರಾಜ್ಯಕ್ಕೆ ಹೆಚ್ಚುವರಿ ಕರೊನಾ ವ್ಯಾಕ್ಸಿನ್ ಕೊಡುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಕೊಡಲು ತೆರಳುತ್ತಿದ್ದಾರೆ. ಆ ಬಳಿಕ ಅಸಮಾಧಾನಿತ ಶಾಸಕ ಹಾಗೂ ಸಚಿವರ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲಿರುವ ಸಿಎಂ, ರಾಜ್ಯ ಸಂಪುಟ ಕ್ಯಾತೆಗೆ ವರಿಷ್ಠರಿಂದಲೇ ಪರಿಹಾರ ಸೂತ್ರ ಕಂಡುಕೊಳ್ಳಲಿದ್ದಾರೆ ಎನ್ನಲಾಗಿದೆ.
ಸಂಸತ್ತು ಬೇಸರ ಮೂಡಿಸುವ ಪರಿಸ್ಥಿತಿಯಲ್ಲಿದೆ ಎಂದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ