ನವದೆಹಲಿ: ಕರೊನಾ ಕೋವಿಡ್ 19 ವೈರಸ್ ಸೋಂಕು ತಡೆಯುವ ಸಲುವಾಗಿ ಘೋಷಿಸಿರುವ ಲಾಕ್ಡೌನ್ ಕಾರಣಕ್ಕೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಬಡವರಿಗೆ ನವೆಂಬರ್ ತನಕ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸುವ ಯೋಜನೆ ಸೇರಿ ಮೂರು ವಿಚಾರಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಯೋಜನೆ ಮೂಲಕ ದೇಶದ 81 ಕೋಟಿ ಬಡವರಿಗೆ ಪ್ರತಿಯೊಬ್ಬರಿಗೂ ತಲಾ 5 ಕಿಲೋ ಆಹಾರ ಧಾನ್ಯ ಮತ್ತು ಒಂದು ಕಿಲೋ ಬೇಳೆಕಾಳನ್ನು ಇನ್ನೂ ಐದು ತಿಂಗಳು ವಿತರಿಸಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಇದಲ್ಲದೆ, ದೇಶದ 7.4 ಕೋಟಿ ಬಡ ಮಹಿಳೆಯರಿಗೆ ಸೆಪ್ಟೆಂಬರ್ ತನಕ ಮೂರು ಅಡುಗೆ ಸಿಲಿಂಡರ್ ಉಚಿತವಾಗಿ ಸಿಗಲಿದೆ. ಇದಕ್ಕೂ ಮೊದಲು ಏಪ್ರಿಲ್-ಜೂನ್ ತನಕ ಈ ಕೊಡುಗೆ ನೀಡಲಾಗಿತ್ತು ಎಂದು ವಾರ್ತಾ ಮತ್ತು ಮಾಹಿತಿ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಲ್ಪಾವಧಿ ಸಾಲಗಳ ಎಂಸಿಎಲ್ಆರ್ 5-10 ಮೂಲಾಂಶ ಕಡಿತಗೊಳಿಸಿದ ಎಸ್ಬಿಐ
ಇದಲ್ಲದೆ, ಉದ್ಯೋಗಿಗಳ ಇಪಿಎಫ್ ಪಾಲು ಶೇಕಡ 24 (ಶೇಕಡ 12 ಉದ್ಯೋಗಿಯದ್ದೂ, ಶೇಕಡ 12 ಉದ್ಯೋಗದಾತರದ್ದೂ) ಅನ್ನು ಇನ್ನೂ ಮೂರು ತಿಂಗಳು ಕೇಂದ್ರ ಸರ್ಕಾರವೇ ಭರಿಸಲಿದೆ. ಇದು ಜೂನ್ ತಿಂಗಳಿಂದ ಆಗಸ್ಟ್ ವರೆಗಿನ ಮೂರು ತಿಂಗಳ ಅವಧಿಗೆ ಅನ್ವಯವಾಗಲಿದೆ. ಸರ್ಕಾರದ ಈ ನಡೆಯಿಂದ 72 ಲಕ್ಷ ಉದ್ಯೋಗಳಿಗೆ ಪ್ರಯೋಜನವಾಗಲಿದೆ. ಇದಕ್ಕಾಗಿ ಸರ್ಕಾರ 4,860 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಸಚಿವ ಜಾವಡೇಕರ್ ವಿವರಿಸಿದರು. (ಏಜೆನ್ಸೀಸ್)