ಲಖ್ನೌ: ಕಳೆದ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ನಡೆದಿದ್ದ ಗಲಭೆಯಲ್ಲಿ ಭಾಗವಹಿಸಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಮೂವರು ಕಾರ್ಯಕರ್ತರನ್ನು ಲಖ್ನೌ ಪೊಲೀಸರು ಬಂಧಿಸಿದ್ದಾರೆ.
ಇವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಹಿಂಸಾಚಾರಕ್ಕೆ ಕಾರಣವಾಗಿದ್ದರು. ಅಲ್ಲದೆ, ಸುಳ್ಳು ಸುದ್ದಿ ಹಬ್ಬಿಸಿ ಪ್ರತಿಭಟಿಸುವಂತೆ ಪ್ರಚೋದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಫ್ಐನ ಕಾರ್ಯಕರ್ತರಾದ ಶಕೀಲ್ ಉರ್ ರೆಹಮಾನ್, ಶಬಿ ಖಾನ್ ಮತ್ತು ಅರ್ಷದ್ ಬಂಧಿತರು. ಕಳೆದ ಡಿಸೆಂಬರ್ 24ರಂದು ಪಿಎಫ್ಐನ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ವಾಸೀಮ್ ಅಹಮದ್, ನದೀಮ್ ಮತ್ತು ವಿಭಾಗೀಯ ಅಧ್ಯಕ್ಷ ಅಶ್ಫಾಕ್ ಅವರನ್ನು ಲಖ್ನೌ ಪೊಲೀಸರು ಬಂಧಿಸಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ್ದ ಹಿನ್ನೆಲೆಯಲ್ಲಿ ಸಂಘಟನೆಯನ್ನು ರದ್ದು ಪಡಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದರು.
ವಿವಿಧ ಮೂಲಗಳಿಂದ ಪಿಎಫ್ಐಗೆ 120 ಕೋಟಿ ರೂಪಾಯಿ ಹರಿದು ಬಂದದ್ದನ್ನು ಮತ್ತು ದೇಶಾದ್ಯಂತ ನಡೆದ ಪ್ರತಿಭಟನ ವೇಳೆಯ ಹಿಂಸಾಚಾರಕ್ಕೆ ಸಂಘಟನೆಯ ಸಂಬಂಧವನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿತ್ತು. (ಏಜೆನ್ಸೀಸ್)