ಉತ್ತರಪ್ರದೇಶ: ಹೊಸ ಸ್ಮಾರ್ಟ್ಫೋನ್ ಖರೀದಿಸಿದರೆ ಉಚಿತವಾಗಿ ಎರಡು ಬಾಟಲ್ ಬಿಯರ್ ನೀಡುತ್ತಿದ್ದ ಮೊಬೈಲ್ ಅಂಗಡಿಯಾತನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಸಾರ್ವರ್ಜನಿಕ ಶಾಂತಿಗೆ ಭಂಗ ತಂದ ಆರೋಪದಲ್ಲಿ ರಾಜೇಶ್ ಮೌರ್ಯ ಬಂಧನವಾಗಿದ್ದು, ಅಂಗಡಿಗೆ ಸೀಲ್ ಹಾಕಲಾಗಿದೆ ಎಂದು ವರದಿಯಾಗಿದೆ.
ಚೌರಿ ರಸ್ತೆಯಲ್ಲಿ ಮೊಬೈಲ್ ಫೋನ್ ಅಂಗಡಿ ನಡೆಸುತ್ತಿರುವ ರಾಜೇಶ್ ಮೌರ್ಯ ಎಂಬಾತ, ಮಾರ್ಚ್ 3 ರಿಂದ 7 ರ ನಡುವೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಖರೀದಿಸುವವರಿಗೆ ಎರಡು ಕ್ಯಾನ್ ಬಿಯರ್ ಉಚಿತವಾಗಿ ನೀಡುವುದಾಗಿ ಪೋಸ್ಟರ್, ಕರಪತ್ರಗಳು ಹಂಚಿ ಪ್ರಚಾರ ಮಾಡಿದ್ದ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಜಯ್ ಕುಮಾರ್ ಸೇಠ್ ತಿಳಿಸಿದ್ದಾರೆ.
ಇದನ್ನೂ ಓದಿ: ಗರ್ಭದಲ್ಲಿರುವ ಶಿಶುಗಳಿಗೆ ಮೌಲ್ಯಗಳನ್ನು ಕಲಿಸಲು ಆರ್ಎಸ್ಎಸ್ನಿಂದ ‘ಗರ್ಭ ಸಂಸ್ಕಾರ’ ಅಭಿಯಾನ
ಬಿಯರ್ ನೀಡುತ್ತೇನೆ ಎಂದ ಆಫರ್ ವೈರಲ್ ಆಗುತ್ತಿದ್ದಂತೆ ಗ್ರಾಹಕರು ಅಂಗಡಿ ಮುಂದೆ ಮುಗಿಬಿದ್ದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಅವರು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಹೀಗಾಗಿ ಪೊಲೀಸರು ಅಂಗಡಿಯಲ್ಲಿ ಜಮಾಯಿಸಿದ ಗುಂಪನ್ನು ಚದುರಿಸಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 (ಸಾರ್ವಜನಿಕ ಶಾಂತಿಗೆ ಭಂಗ ತರುವ) ಅಡಿಯಲ್ಲಿ ರಾಜೇಶ್ ಮೌರ್ಯನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)