ಶಿವಮೊಗ್ಗ: ಹೊರವಲಯದ ಸೂಳೆಬೈಲ್ನ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಕಸಾಯಿಖಾನೆ ಮೇಲೆ ತುಂಗಾನಗರ ಠಾಣೆ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಜಂಟಿ ಕಾರ್ಯಾಚರಣೆ ನಡೆಸಿ 9 ಗೋವುಗಳನ್ನು ರಕ್ಷಿಸಿದ್ದಾರೆ. ಗೋಮಾಂಸಕ್ಕಾಗಿ ಏಳು ಹಸುಗಳನ್ನು ವಧೆ ಮಾಡಿದ್ದು ಕಸಾಯಿಖಾನೆ ಮಾಲೀಕ ಪರಾರಿಯಾಗಿದ್ದಾನೆ. ಕೃತ್ಯದ ಬೆನ್ನೆಲ್ಲೆ ಎಚ್ಚೆತ್ತುಕೊಂಡ ಪಾಲಿಕೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಕಸಾಯಿಖಾನೆಯನ್ನು ನೆಲಸಮಗೊಳಿಸಿದೆ.
ಸೂಳೆಬೈಲಿನ ಅಬ್ದುಲ್ ಅಜೀಜ್ ಎಂಬಾತ ತನ್ನ ಮನೆಯ ಹಿಂಭಾಗ ಶೆಡ್ ನಿರ್ಮಿಸಿಕೊಂಡಿದ್ದ. ಗೋ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕಸಾಯಿಖಾನೆ ನಿರ್ಮಿಸಿಕೊಂಡು ಮಾಂಸ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಅಧಿಕಾರಿಗಳು ದಾಳಿ ನಡೆಸಿದಾಗ ಮಾಂಸಕ್ಕಾಗಿ ಏಳು ಹಸುಗಳನ್ನು ವಧೆ ಮಾಡಲಾಗಿತ್ತು. ದಾಳಿ ಬೆನ್ನಲ್ಲೆ ಆರೋಪಿ ಅಬ್ದುಲ್ ಅಜೀಜ್ ಪರಾರಿಯಾಗಿದ್ದಾನೆ.
ಗುಪ್ತಚರ ಮಾಹಿತಿ ಹಿನ್ನಲೆಯಲ್ಲಿ ತುಂಗಾನಗರ ಇನ್ಸ್ಪೆಕ್ಟರ್ ಬಿ.ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ. ಗೋವುಗಳ ಕಾಲು ಕಟ್ಟಿ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದು ಹಸುಗಳು ರಕ್ತದ ಮಡುವಿನಲ್ಲಿ ಬಿದ್ದಿವೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸಾಯಿಖಾನೆ ನೆಲಸಮ:
ಅಕ್ರಮವಾಗಿ ಕಸಾಯಿಖಾನೆ ಮಾಡಿಕೊಂಡು ಗೋವುಗಳ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪಾಲಿಕೆ ಜನಪ್ರತಿನಿಧಿಗಳು ಸೂಳೆಬೈಲ್ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕಸಾಯಿಖಾನೆ ಮಾಡಿಕೊಂಡಿದ್ದ ಜಾಗದಲ್ಲಿ ಅಕ್ರಮವಾಗಿ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡಿದ್ದು ಅಧಿಕಾರಿಗಳು ಜೆಸಿಬಿ ಮೂಲಕ ನೆಲಸಮಗೊಳಿಸಿದರು.
ಮೇಯರ್ ಎಸ್.ಶಿವಕುಮಾರ್, ಉಪ ಮೇಯರ್ ಲಕ್ಷ್ಮೀಶಂಕರನಾಯ್ಕ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಜ್ಞಾನೇಶ್ವರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಎಸ್. ಮಂಜುನಾಥ, ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಆರತಿ ಪ್ರಕಾಶ್, ಸದಸ್ಯ ಯು.ಎಚ್.ವಿಶ್ವನಾಥ್, ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ ಸದಸ್ಯ ಎಸ್.ಎನ್.ಚನ್ನಬಸಪ್ಪ, ತುಂಗಾನಗರ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತಿತರರಿದ್ದರು.