ಉಡುಪಿ: ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ ಶೆಟ್ಟಿ ಇಂದು ಹಾಡಹಗಲೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂಬುದನ್ನು ಅವರ ಡೆತ್ನೋಟ್ ಬಹಿರಂಗಪಡಿಸಿದೆ.
ಸುಮಾರು 80 ವರ್ಷ ಪ್ರಾಯದ ಭೋಜಣ್ಣ ಶೆಟ್ಟಿ ಇಂದು ಕೋಟೇಶ್ವರ ಸಮೀಪದ ಪುರಾಣಿಕ ರಸ್ತೆಯ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವರ ಮನೆಯ ಸಿಟೌಟ್ನಲ್ಲಿ ರಿವಾಲ್ವಾರ್ನಿಂದ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದರು.
ಇದೀಗ ಅವರ ಡೆತ್ನೋಟ್ ಸಿಕ್ಕಿದ್ದು, ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಹಂಗಳೂರು ಇಸ್ಮಾಯಿಲ್ ಅವರು ಹೆಸರು ಪ್ರಸ್ತಾಪವಾಗಿದೆ. ಇಬ್ಬರೂ ಸೇರಿ 3.34 ಕೋಟಿ ರೂಪಾಯಿ ಮತ್ತು 5 ಕೆ.ಜಿ. ಬಂಗಾರ ಪಡೆದು ವಂಚಿಸಿದ್ದಾರೆ ಎಂದು ಡೆತ್ನೋಟ್ನಲ್ಲಿ ಆರೋಪಿಸಲಾಗಿದೆ.
ಬಡ್ಡಿ ಆಸೆ ತೋರಿಸಿ ಹಣ ಪಡೆದಿದ್ದರು. ಆದರೆ ಬಡ್ಡಿ ನೀಡದೆ ಅಸಲೂ ಹಿಂದಿರುಗಿಸದೆ ಮೊಳಹಳ್ಳಿ ಗಣೇಶ್ ಶೆಟ್ಟಿ ಸತಾಯಿಸುತ್ತಿದ್ದ ವಿಚಾರ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಳಿಗೂ ಹೋಗಿತ್ತು. ಈ ಸಂಬಂಧ ಅವರು ಐದಾರು ಬಾರಿ ರಾಜಿ ಪಂಚಾಯ್ತಿ ನಡೆಸಿದ್ದರು. ಆ ಬಳಿಕವೂ ಹಣ ಕೊಡದೆ ಸತಾಯಿಸಿದ್ದರಿಂದ ಬೇಸತ್ತು ಇಂದು ಗಣೇಶ್ ಶೆಟ್ಟಿ ಮನೆ ಮುಂಭಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳೂರು ಇಸ್ಮಾಯಿಲ್ ಮತ್ತು ಗಣೇಶ್ ಶೆಟ್ಟಿ ಅವರಿಂದ ನಮ್ಮ ಮನೆಯವರಿಗೆ ಹಣ ವಸೂಲಿ ಮಾಡಿಸಿ ಮರಳಿಸುವಂತೆ ಭೋಜಣ್ಣ ಡೆತ್ನೋಟ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ.