ದೇವದುರ್ಗ: ಸರ್ಕಾರಿ ನೌಕರರು ಎಂದು ಪರಿಗಣಿಸಲು ಒತ್ತಾಯಿಸಿ 4ದಿನಗಳಿಂದ ಸಾರಿಗೆ ಸಂಸ್ಥೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದಿಂದ ಸಾರ್ವಜನಿಕರು ಬಳಲಿಬೆಂಡಾಗಿದ್ದರು. ಅಧಿಕಾರಿಗಳು ಸಿಬ್ಬಂದಿ ಮನವೊಲಿಸುವ ಸಾಹಸಕ್ಕೆ ಕೈಹಾಕಿದ್ದು, ಸೋಮವಾರ ಮಧ್ಯಾಹ್ನ 3 ಮಾರ್ಗದ ಬಸ್ಗಳನ್ನು ಪೊಲೀಸ್ ಎಸ್ಕಾರ್ಟ್ನಲ್ಲಿ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಧುರಾಜ್ ಯಾಳಗಿ, ಡಿಪೋ ವ್ಯವಸ್ಥಾಪಕ ಹಸನ್ಅಲಿ, ಸಿಪಿಐ ಆರ್.ಎಂ.ನದಾಫ್ ಸಾರಿಗೆ ಸಂಸ್ಥೆ ಸಿಬ್ಬಂದಿ ಜತೆ ಮಾತುಕತೆ ನಡೆಸುವಲ್ಲಿ ಸಫಲರಾಗಿದ್ದರೆ. ಮೂವರು ಡ್ರೈವರ್, ಕಂಡಕ್ಟರ್ ಮನವೊಲಿಸಿದ ಅಧಿಕಾರಿಗಳು, ಪ್ರಮುಖ 3 ಮಾರ್ಗದ ಬಸ್ಗಳನ್ನು ಓಡಿಸುತ್ತಿದ್ದು, ಹಂತಹಂತವಾಗಿ ಬಸ್ಗಳ ಸಂಚಾರ ಮಾರ್ಗ ಹೆಚ್ಚಿಸಲು ಮುಂದಾಗಿದ್ದಾರೆ.
ಮೊದಲ ಮಾರ್ಗವಾಗಿ ತಿಂಥಣಿ ಬ್ರಿಡ್ಜ್ಗೆ ಒಂದು ಬಸ್ ಓಡಿಸುತ್ತಿದ್ದು, ಹಿಂಭಾಗದಲ್ಲಿ ಪೊಲೀಸ್ ಜೀಪ್ನಲ್ಲಿ ಎಸ್ಕಾರ್ಟ್ ನೀಡಿದೆ. ಪೊಲೀಸ್ ಸರ್ಪಗಾವಲಿನಲ್ಲಿ ಬಸ್ಗಳು ಸಂಚರಿಸುತ್ತಿವೆ. ಎರಡನೇ ಹಂತವಾಗಿ ರಾಯಚೂರಿಗೆ ಬಸ್ ಓಡಾಡುತ್ತಿದ್ದು, ಗಬ್ಬೂರುವರೆಗೆ ಪೊಲೀಸ್ ಎಸ್ಕಾರ್ಟ್ ನೀಡಲಾಗುತ್ತಿದೆ. 3ನೇ ಮಾರ್ಗವಾಗಿ ಶಹಾಪುರಗೆ ಬಸ್ ಬಿಟ್ಟಿದ್ದು, ಹೂವಿನಹೆಡಗಿವರೆಗೆ ಎಸ್ಕಾರ್ಟ್ ನೀಡಲಾಗುತ್ತಿದೆ.
ಸಾರಿಗೆ ಸಂಸ್ಥೆ ಅಧಿಕಾರಿಗಳು, ಕಂದಾಯ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಮನೆಮನೆಗೆ ತೆರಳಿ ಮನವೊಲಿಸುತ್ತಿದ್ದಾರೆ. ಕೆಲವರು ಕೆಲಸಕ್ಕೆ ಬರಲು ಹಿಂದೇಟು ಹಾಕಿದರೆ, ಕೆಲವರು ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಬರುತ್ತಿದ್ದಾರೆ. ಬಸ್ ಸಂಚಾರದಿಂದ ಪ್ರಯಾಣಿಕರಿಗೆ ಅನುಕೂಲವಾಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಬಸ್ ನೋಡಿ ಪ್ರಯಾಣಿಕರು ನಿಧಾನವಾಗಿ ನಿಲ್ದಾಣದತ್ತ ಬರುತ್ತಿದ್ದಾರೆ.