ಯಲಬುರ್ಗಾ: ಕಲ್ಲೂರು ಗ್ರಾಮದಲ್ಲಿ ಪಾದಗಟ್ಟೆಯಿಂದ ಆಂಜನೇಯ ದೇವಸ್ಥಾನದವರೆಗೆ ರಸ್ತೆ ವಿಸ್ತರಣೆ ಕಾರಣ ಗ್ರಾಪಂನಿಂದ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಬುಧವಾರ ಪೊಲೀಸರ ಸರ್ಪಗಾವಲಿನಲ್ಲಿ ನಡೆಯಿತು.

ಅನಧಿಕೃತ ಕಟ್ಟಡ, ಶೌಚಗೃಹ ತೆರವು ವೇಳೆ ನಿಯಮ ಪಾಲನೆ ಆಗಿಲ್ಲವೆಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಐತಿಹಾಸಿಕ ಕಲ್ಲಿನಾಥೇಶ್ವರ ದೇವಸ್ಥಾನ ಇರುವ ಸುಕ್ಷೇತ್ರ ಕಲ್ಲೂರಿನ ಅಭಿವೃದ್ಧಿಗೆ ತಕರಾರಿಲ್ಲ. ಆದರೆ ಜಿಲ್ಲಾಧಿಕಾರಿ ಆದೇಶದಂತೆ ಕಾರ್ಯಾಚರಣೆ ನಡೆಸುತ್ತಿಲ್ಲ. ರಸ್ತೆಯ ಮಧ್ಯಭಾಗದಿಂದ ಎಡ ಮತ್ತು ಬಲ ಭಾಗಕ್ಕೆ ವೈಜ್ಞಾನಿಕವಾಗಿ ಎಷ್ಟು ಫೀಟ್ ತೆರವುಗೊಳಿಸಬೇಕು ಎನ್ನುವುದರ ಕುರಿತು ಯಾರಿಗೂ ಮಾಹಿತಿ ಇಲ್ಲ. ಗ್ರಾಪಂನವರು ಈ ರೀತಿ ಮಾಡುವುದು ಸರಿಯಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ತಹಸೀಲ್ದಾರ್ ಶ್ರೀಶೈಲ ತಳವಾರ್, ತಾಪಂ ಇಒ ಸಂತೋಷ ಪಾಟೀಲ್, ಸಿಪಿಐ ವೀರಾರಡ್ಡಿ, ಪಿಎಸ್ಐ ಹುಲಗೇಶ ಓಂಕಾರ ಇದ್ದರು.
66 ಜನರಿಗೆ ನೋಟಸ್: ರಸ್ತೆ ವಿಸ್ತರಣೆ ಸಂಬಂಧ ಅನಧಿಕೃತ ಕಟ್ಟಡ ತೆರವುಗೊಳಿಸಲು ಮುಂಜಾಗ್ರತಾ ಕ್ರಮವಾಗಿ 66 ಜನರಿಗೆ ನೋಟಿಸ್ ಜಾರಿ ಮಾಡಿ, ಮೂರು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಈ ಕುರಿತು ಸಂಬಂಧಿಸಿದವರು ತಕರಾರು ಮಾಡಿರಲಿಲ್ಲ. ಈಗ ಕಾರ್ಯಾಚರಣೆ ವೇಳೆ ಕೆಲವರು ಅಡ್ಡಿಪಡಿಸುತ್ತಿರುವುದಾಗಿ ಗ್ರಾಪಂ ಅಧ್ಯಕ್ಷ ಕಲ್ಲಪ್ಪ ಹಾಗೂ ಪಿಡಿಒ ರೇಣುಕಾ ಟಂಕದ ತಿಳಿಸಿದರು.