ಚಿಕ್ಕಮಗಳೂರು: ರಾಜ್ಯ ಸರ್ಕಾರ ಒಂಬತ್ತು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ನೌಕರರು ಮುಷ್ಕರ ಅಂತ್ಯಗೊಳಿಸಿದರು. ಸೋಮವಾರ ಮುಷ್ಕರ ಮುಂದುವರಿದಿತ್ತಾದರೂ ಕೆಲ ಬಸ್ಗಳು ಸಂಚರಿಸಿದ್ದರಿಂದ ಪ್ರಯಾಣಿಕರಿಗೆ ಅಷ್ಟೇನೂ ತೊಂದರೆಯಾಗಲಿಲ್ಲ. ಎಲ್ಲ ಬಸ್ಗಳು ಮಂಗಳವಾರ ಬೆಳಗ್ಗೆಯಿಂದ ಎಂದಿನಂತೆ ಸಂಚರಿಸಲಿವೆ.
ಬೆಳಗ್ಗೆ ಬೇರೆ ಜಿಲ್ಲೆಗಳಲ್ಲಿ ಬಸ್ ಸಂಚಾರ ಆರಂಭವಾಗಿದ್ದರಿಂದ ಚಿಕ್ಕಮಗಳೂರಲ್ಲೂ ಆರಂಭಿಸಿದರು. ಇನ್ನೂ ಕೆಲ ಸಿಬ್ಬಂದಿ ಗಾಂಧಿ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ಮುಂದುವರಿಸಿದರು. ಸಾರಿಗೆ ಸಚಿವರು ನೀಡಿದ ಭರವಸೆಗಳನ್ನು ಸರ್ಕಾರ ಅಧಿಕೃತವಾಗಿ ಆದೇಶ ಮಾಡಿ, ಆ ಬಗ್ಗೆ ರಾಜ್ಯ ಮುಖಂಡರ ಸೂಚನೆ ಬರುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಸೋಮವಾರ ಬೆಳಗ್ಗೆ ಪೊಲೀಸ್ ಎಸ್ಕಾರ್ಟ್ ಮೂಲಕ ಬಸ್ ಸಂಚಾರ ಆರಂಭಿಸಿದ ಪರಿಣಾಮ ಪ್ರಯಾಣಿಕರ ಪರದಾಟಕ್ಕೆ ಕೊಂಚ ಬ್ರೇಕ್ ಹಾಕಿದಂತಾಯಿತು. ಬೆಳಗ್ಗೆ ಬೆಳಗ್ಗೆ 9ಕ್ಕೆ ನಗರದ ಡಿಪೋದಿಂದ 10ಕ್ಕೂ ಹೆಚ್ಚು ಬಸ್ಗಳು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದವು. ಪ್ಲಾಟ್ ಫಾಮರ್್ನಲ್ಲಿ ನಿಲ್ಲುತ್ತಿದ್ದಂತೆ ಕಡೂರು, ಬೆಂಗಳೂರು, ಶೃಂಗೇರಿ, ಮೂಡಿಗೆರೆ, ಬಾಣಾವರ, ಸಖರಾಯಪಟ್ಟಣ, ಹಾಸನ ಮಾರ್ಗದ ಪ್ರಯಾಣಿಕರು ಬಸ್ ಏರಿದರು.
ವಿಭಾಗೀಯ ನಿಯಂತ್ರಾಣಧಿಕಾರಿ ಎಚ್.ಟಿ.ವೀರೇಶ್ ಹಾಗೂ ಅಧಿಕಾರಿ ಬಿ.ಎಸ್.ರಮೇಶ್ ಇತರರು ಚಾಲಕರಿಗೆ ಧೈರ್ಯ ತುಂಬಿ ಶೃಂಗೇರಿ ಮಾರ್ಗದ ವಾಹನವನ್ನು ಪ್ರಥಮವಾಗಿ ರಸ್ತೆಗಿಳಿಸಿದರು. ನಂತರ ಕಡೂರು ಬಸ್ ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿತ್ತು. ಯಾವುದೆ ಅಹಿತಕರ ಘಟನೆಗೆ ಅವಕಾಶ ನೀಡಬಾರದೆಂಬ ಉದ್ದೇಶದಿಂದ ನಿಲ್ದಾಣದಿಂದ ಹೊರಟ ಬಸ್ಗಳಿಗೆ ನಗರ ಹೊರವಲಯದವರೆಗೂ ಪೊಲೀಸ್ ವಾಹನ ಎಸ್ಕಾರ್ಟ್ ನೀಡಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತು.
ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡು ನಾಲ್ಕು ದಿನಗಳಿಂದ ನಡೆಯುತ್ತಿದ್ದ ಮುಷ್ಕರ ಸುಖಾಂತ್ಯ ಕಂಡಿದ್ದರಿಂದ ಚಾಲಕರು, ನಿರ್ವಾಹಕರು, ನೌಕರರು ನಿಟ್ಟುಸಿರು ಬಿಟ್ಟರು. ಖಾಸಗಿ ವಾಹನದಲ್ಲಿ ದುಬಾರಿ ವೆಚ್ಚ ನೀಡಿ ಸಂಚರಿಸುತ್ತಿದ್ದ ಪ್ರಯಾಣಿಕರು ಕೂಡ ನಿರಾಳರಾಗಿದ್ದಾರೆ.