ಮೊಳಕಾಲ್ಮೂರು: ತಾಲೂಕಿನ ರಾಂಪುರ ಬಸ್ ನಿಲ್ದಾಣದ ಆವರಣದಲ್ಲಿ ತಗ್ಗು ಗುಂಡಿಗಳೇ ಇದ್ದು ಸಾರ್ವಜನಿಕರಿಗೆ ಕಿರಿಕಿರಿ ತರಿಸುತ್ತಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರಾಂಪುರ ದೊಡ್ಡ ಗ್ರಾಮವಾಗಿದ್ದು ನಿತ್ಯ ಜನದಟ್ಟಣೆಯಿಂದ ಕೂಡಿರುತ್ತದೆ. ಈಚೆಗೆ ಸುರಿದ ಮಳೆಯಿಂದ ಇಲ್ಲಿನ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಮೈಮರೆತರೆ ಅನಾಹುತ ಖಚಿತ.
ಕುಡಿಯುವ ನೀರಿನ ತೊಂದರೆಯಿದ್ದು, ಎರಡು ವರ್ಷವಾದರೂ ಪರಿಹಾರ ದೊರೆತಿಲ್ಲ. ಸಂಬಂಧಿತ ಇಲಾಖಾ ಅಧಿಕಾರಿಗಳು ಗಮನ ಹರಿಸಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಂಪುರ ಸಾರ್ವಜನಿಕ ಬಸ್ ನಿಲ್ದಾಣದ ಕಾಯಕಲ್ಪಕ್ಕೆ ಅಂದಾಜು 30 ಲಕ್ಷ ರೂ. ಅನುದಾನದ ತುರ್ತು ಅಗತ್ಯತೆ ಇದೆ. ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ತಾತ್ಕಾಲಿಕವಾಗಿ ಗುಂಡಿಗಳನ್ನ ಮುಚ್ಚಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆಗೆ ಶೀಘ್ರವೇ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಾಪಂ ಇಒ ಪ್ರಕಾಶ್ ತಿಳಿಸಿದ್ದಾರೆ.