ಮೂಡಿಗೆರೆ: ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಡಿಯುವ ನೀರಿಗೆ ಪರದಾಡುವುದನ್ನು ಗಮನಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ಎಚ್.ಎಲ್.ಎಸ್.ತೇಜಸ್ವಿ ಹೇಳಿದರು. ಬುಧವಾರ ರೋಟರಿ ಸಂಸ್ಥೆಯಿಂದ ಎಸ್.ಸೋಹನ್ರಾಜ್ ನೆನಪಿಗಾಗಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಘಟಕ ಉದ್ಘಾಟನೆಯಲ್ಲಿ ಮಾತನಾಡಿದರು. ರಾಜ್ಯದೆಲ್ಲೆಡೆ ಬರ ಆವರಿಸಿದೆ. ಶುದ್ಧ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹಣ ಕೊಟ್ಟು ಶುದ್ಧ ಕುಡಿಯುವ ನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಕಾಫಿ ಉದ್ಯಮಿ ಎಸ್.ಬವರ್ಲಾಲ್ ಜೈನ್ ಅವರು ತಂದೆ ಎಸ್.ಸೋಹನ್ ರಾಜ್ ನೆನಪಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು. ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಕಾರ್ಯದರ್ಶಿ ಸಚಿನ್, ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕ ಮಂಜುನಾಥ್, ಎ.ಜಿ.ವಿನೋದ್ಕುಮಾರ್, ವಿವೇಕ್ ಪುಣ್ಯಮೂರ್ತಿ, ಪ್ರಸಾದ್, ನರೇಂದ್ರ ಶೆಟ್ಟಿ, ಬಿ.ಸಿ.ಅಶ್ವತ್ಥ್, ರಂಜಿತ್, ಸುಧಾಕರ್, ಡಾ. ಪ್ರದೀಪ್, ದಿನೇಶ್, ಶೈಲೇಶ್, ಡಾ. ಜೀವನ್ ಕಳಮೆ, ಸಂತೋಷ್ ಇತರರಿದ್ದರು.