ಕುಣಿಗಲ್: ಸರ್ ಎಲ್ಲಿದ್ದೀರಾ…ಇಲ್ಲೊಂದು ಅನಾಥ ಶವ ಸಿಕ್ಕಿದೆ. ವಾಸುದಾರರಿಲ್ಲ, ಬರ್ತೀರಾ ಎಂದು ಪೊಲೀಸರು ಕರೆ ಮಾಡಿದರೆ ಸಾಕು, ತಕ್ಷಣವೇ ತೆರಳಿ ಅನಾಥ ಶವಗಳಿಗೆ ಮುಕ್ತಿ ಕಾಣಿಸುವ ಮಾನವೀಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಪುರಸಭೆ ಸದಸ್ಯ ಆನಂದಕುಮಾರ್ (ಕಾಂಬ್ಳೆ).
ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಸಿಗುವ ಅನಾಥ ಶವಗಳ ಸಂಸ್ಕಾರ ಮಾಡಿ ಮುಕ್ತಿ ತೋರಿಸುವ ಕಾಯಕದಲ್ಲಿ ಆನಂದಕುಮಾರ್ ಅವರ ತಂದೆ ಮಾರಪ್ಪ ಮೊದಲು ತೊಡಗಿಸಿಕೊಂಡಿದ್ದರು.
ತಂದೆಯ ಕೆಲಸಕ್ಕೆ ಸಹಾಯ ಮಾಡುತ್ತಿದ್ದ ಆನಂದಕುಮಾರ್, ತಂದೆಯ ಮರಣದ ನಂತರವೂ ಆ ಕೆಲಸ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅನಾಥ ಶವ ಸಿಕ್ಕ ತಕ್ಷಣ ಪೊಲೀಸರು ಕಾನೂನು ಪ್ರಕ್ರಿಯೆ ಮುಗಿಸಿ ಆನಂದಕುಮಾರ್ಗೆ ಕರೆ ಮಾಡುತ್ತಾರೆ.
ಸ್ಮಶಾನದಲ್ಲಿ ಗುಂಡಿ ತೆಗೆಸಿ ಶವ ಸಂಸ್ಕಾರ ಮಾಡಿದ ನಂತರ ಸಮಾಧಿಗೆ ಹೂವು, ಹಣ್ಣು ಕಾಯಿ, ಗಂಧದಕಡ್ಡಿ ಇಟ್ಟು ಪೂಜೆ ಮಾಡಿ ಪೊಲೀಸರ ಮಹಜರ್ಗೂ ಸಹಿ ಹಾಕುವ ಆನಂದಕುಮಾರ್ ಕಾರ್ಯಕ್ಕೆ ಸ್ನೇಹ ಬಳಗವೂ ಸಾಥ್ ನೀಡುತ್ತಿದೆ.
ಶವ ಸಂಸ್ಕಾರಕ್ಕೆ ಪೊಲೀಸರಿಂದಾಗಲಿ, ಬೇರೆ ಯಾರಿಂದಲೂ ಹಣ ಪಡೆಯುವುದಿಲ್ಲ. ಮೂಲತಃ ಪೌರಕಾರ್ಮಿಕರಾಗಿದ್ದ ತಂದೆ ಮಾರಪ್ಪ ಅವರಿಂದ ಬಳುವಳಿಯಾಗಿ ಈ ಸೇವೆ ಬಂದಿದ್ದು, ಇಲ್ಲಿವರೆಗೂ 75ಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಈ ವಾರವೇ ಕುಣಿಗಲ್ನಲ್ಲಿ 4 ಶವಗಳು ಪತ್ತೆಯಾಗಿದ್ದು, ಮುಕ್ತಿ ತೋರಿದ್ದಾರೆ.
ಅನಾಥ ಶವ ಸಿಕ್ಕಾಗ ಆನಂದಕುಮಾರ್ ಊರಿನಲ್ಲಿ ಇಲ್ಲವಾದರೂ ಹುಡುಗರಿಗೆ ಹೇಳಿ ಶವ ಸಂಸ್ಕಾರ ಕಾರ್ಯ ನೆರವೇರಿಸುವ ಮೂಲಕ ಪೊಲೀಸರ ತಲೆ ಬಿಸಿ ತಣ್ಣಗಾಗಿಸುತ್ತಾರೆ.
ಇತ್ತೀಚಿಗೆ ಅನಾಥ ಶವಗಳು ಪಟ್ಟಣದಲ್ಲಿ ಹೆಚ್ಚಾಗಿವೆ. ಶವ ಸಂಸ್ಕಾರ ಮಾಡುವುದು ಪೊಲೀಸರಿಗೆ ಕೆಲಸದ ಒತ್ತಡದಲ್ಲಿ ಹೆಚ್ಚುವರಿ ಕೆಲಸವಾಗಿದೆ. ಅನಾಥ ಶವಗಳನ್ನು ಮುಟ್ಟಲು ಯಾರೂ ಬರುವುದಿಲ್ಲ. ಆದರೆ ಆನಂದಕುಮಾರ್ ಶವ ಸಂಸ್ಕಾರ ಮಾಡಿ ಮಹಜರಿಗೂ ಸಹಿ ಮಾಡಿ ಹೋಗುತ್ತಾರೆ. ಅವರ ಸಹಕಾರ ಪೊಲೀಸ್ ಇಲಾಖೆಗೆ ನೆರವಾಗುತ್ತಿದೆ.
| ಗುರುಪ್ರಸಾದ್ ಸಿಪಿಐ ಕುಣಿಗಲ್ನನ್ನ ತಂದೆ ಮಾಡುತ್ತಿದ್ದ ಕೆಲಸ ನೋಡುತ್ತಿದ್ದೆ. ಅನಾಥ ಶವಗಳ ಸಂಸ್ಕಾರ ಮಾಡಿದರೆ ಪುಣ್ಯ ಬರುತ್ತದೆ. ನಿನ್ನ ಮಕ್ಕಳಿಗೆ ದೇವರು ಒಳ್ಳೆದು ಮಾಡುತ್ತಾನೆ. ಈ ಕೆಲಸ ನಿಲ್ಲಿಸಬೇಡ ಎಂದು ಹೇಳಿದ್ದರು. ಅವರ ಅಸೆಯಂತೆ ಅವರ ಮರಣದ ನಂತರ 10 ವರ್ಷದಿಂದ ಪುರಸಭೆ ಸದಸ್ಯನಾಗುವ ಮೊದಲಿನಿಂದಲೂ ಶವ ಸಂಸ್ಕಾರ ಮಾಡುತ್ತಿದ್ದೇನೆ.
| ಆನಂದಕುಮಾರ್(ಕಾಂಭ್ಳೆ) ಪುರಸಭೆ ಸದಸ್ಯ, ಕುಣಿಗಲ್