ಕಡೂರು: ಪ್ರಸ್ತುತ ಶಿಕ್ಷಣದ ವ್ಯವಸ್ಥೆಯಲ್ಲಿ ಕೇವಲ ಪಠ್ಯಕ್ಕೆ ಮಾತ್ರ ಆದ್ಯತೆ ನೀಡದೆ ಮಕ್ಕಳಿಗೆ ಆತ್ಮಸ್ಥೈರ್ಯ ಮತ್ತು ಏಕಾಗ್ರತೆ ಮೂಡಿಸುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯವಾಗಬೇಕು ಎಂದು ಧಾರವಾಡದ ಹ್ಯೂಮನ್ ಮೈಂಡ್ಸೆಟ್ ತರಬೇತುದಾರ ಮಹೇಶ್ ಮಾಸಾಲ ಹೇಳಿದರು.
ಪಟ್ಟಣದ ಕೆ.ಎಂ.ರಸ್ತೆಯಲ್ಲಿರುವ ಗುರುಕುಲ ಪ್ಲಬಿಕ್ ಶಾಲೆಯಲ್ಲಿ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿ ಮಕ್ಕಳಲ್ಲಿ ಇರುವ ಅಗಮ್ಯ ಶಕ್ತಿಯನ್ನು ಹೊರ ತರುವುದೇ ಶಿಕ್ಷಣ. ವಿವೇಕಾನಂದರ ಆಶಯದಂತೆ ಹುಟ್ಟು ಉಚಿತ ಸಾವು ಖಚಿತ ಇವುಗಳ ನಡುವೆ ಸಾಗುವ ಹಾದಿಯಲ್ಲಿ ಸಾಧನೆ ಮಾಡುವುದನ್ನು ಕಲಿಯಬೇಕಿದೆ ಎಂದರು.
ಯುವ ಜನತೆ ಛಲದೊಂದಿಗೆ ನಿರಂತರ ಪ್ರಯತ್ನ ಪಟ್ಟರೆ ಗೆಲುವು ಸಾಧಿಸಬಹುದು. ಆದರೆ ಗುರಿ ತಲುಪುವ ಬದ್ದತೆ ಹೊಂದಿರಬೇಕು. ಜೀವನದಲ್ಲಿ ಶ್ರದ್ಧೆ, ಆತ್ಮವಿಶ್ವಾಸ, ಪರಿಶ್ರಮ ಮತ್ತು ನಿಶ್ಚಿತ ಗುರಿಯಿದ್ದಲ್ಲಿ ಮಾತ್ರ ಯಶಸ್ಸು ಗಳಿಸ ಬಹುದು. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸಮಯದ ಪ್ರಜ್ಞೆ ಬೆಳೆಸಿ ಮಾನಸಿಕವಾಗಿ ಸದೃಢ ಗೊಳಿಸುವಂತಹ ಶಕ್ತಿ ತುಂಬಬೇಕಿದೆ. ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ, ಸಂಸ್ಕಾರಯುತ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಿದರೆ ಭವಿಷ್ಯದಲ್ಲಿ ಮಕ್ಕಳು ಆರೋಗ್ಯಕರ ಬದುಕಿನೊಂದಿಗೆ ಹಲವು ಸವಾಲಗಳನ್ನು ಮೆಟ್ಟಿ ನಿಲ್ಲಲಿದ್ದಾರೆ ಎಂದು ತಿಳಿಸಿದರು.
ಬಿಸಿಲು ಮತ್ತು ಹಸಿವಿನ ಮಹತ್ವ ತಿಳಿದರವರು ದೊಡ್ಡ ವ್ಯಕ್ತಿಯಾಗಲು ಸಾಧ್ಯ. ಮಕ್ಕಳಿಗೆ ನೆಲ್ಸನ್ ಮಂಡೇಲಾ, ಸ್ವಾಮಿ ವಿವೇಕಾನಂದರಂತಹ ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆ ಬಗ್ಗೆ ಮನದಟ್ಟು ಮಾಡಿದಾಗ ಅವರಲ್ಲಿನ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ. ಮೊದಲು ಪಾಲಕರು ಮಕ್ಕಳ ಮನಸ್ಸು ಗೆಲ್ಲಬೇಕು. ಗುರುಕುಲ ಶಾಲಾ ಶಿಕ್ಷಣ ಪದ್ದತಿಯಲ್ಲಿಯೂ ಮಕ್ಕಳ ಏಕಾಗ್ರತೆ ಮೂಡಿಸುವುದೇ ಬಹುದೊಡ್ಡ ಗುರಿಹೊಂದಿದೆ ಎಂದರು.