ನವದೆಹಲಿ: ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಭಾರತದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ನಿಂದ ಒಳನುಸುಳಲು ಸಾಕಷ್ಟು ಜನರು ಪ್ರಯತ್ನಿಸುತ್ತಾರೆ. ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಈ ಹಾವಳಿ ಹೆಚ್ಚಾಗಿದ್ದರೂ, ಇದೇ ಮೊದಲ ಬಾರಿಗೆ ರಾತ್ರಿ ವೇಳೆ ರಾಜಸ್ಥಾನದ ಮರಳುಗಾಡಿನ ಮೂಲಕ ಭಾರತದೊಳಗೆ ನುಸುಳಲು ಯತ್ನಿಸಿದ ವ್ಯಕ್ತಿಯನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಹತ್ಯೆ ಮಾಡಿದ್ದಾರೆ.
ರಾಜಸ್ಥಾನದ ಬಾರ್ಮರ್ ಜಿಲ್ಲೆಯನ್ನು ಹಾದುಹೋಗಿರುವ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ರಾತ್ರಿ ವೇಳೆ ನುಸುಳುಕೋರನೊಬ್ಬ ಭಾರತದೊಳಗೆ ನುಸುಳಲು ಯತ್ನಿಸಿದ್ದ. ಇದನ್ನು ಗಮನಿಸಿದ ಬಿಎಸ್ಎಫ್ ಯೋಧರು ಆತನೆಡೆಗೆ ಗುಂಡು ಹಾರಿಸಿ, ಬೆದರಿಸಿ ವಾಪಸು ಕಳುಹಿಸಲು ಪ್ರಯತ್ನಿಸಿದ್ದರು. ಆದರೂ ಆತ ಗಡಿಬೇಲಿಯನ್ನು ದಾಟಿಕೊಂಡು ಭಾರತದೆಡೆಗೆ ಓಡಿ ಬಂದಿದ್ದ. ಈ ಸಂದರ್ಭದಲ್ಲಿ ಆತನ ಮೇಲೆ ಗುಂಡಿನ ದಾಳಿ ಮಾಡಲಾಯಿತಾದರೂ ಆತ ಪೊದೆಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ. ಬೆಳಗ್ಗೆ ಹೋಗಿ ನೋಡಿದಾಗ ಆತ ಪೊದೆಯಲ್ಲಿ ಸತ್ತು ಬಿದ್ದಿದ್ದ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ವಾರದಲ್ಲಿ ಅಮೆರಿಕ, ಬ್ರೆಜಿಲ್ ಮೀರಿಸಿದ ಭಾರತ; ಹೊಸ ಕರೊನಾ ಕೇಸ್ಗಳಿಗೆ ಬೀಳುತ್ತಿಲ್ಲ ಕಡಿವಾಣ
ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಬಿಗಿಯಾದ ಪಹರೆಯನ್ನು ಏರ್ಪಡಿಸುತ್ತದೆ. ಶುಕ್ರವಾರ ತಡರಾತ್ರಿಯಲ್ಲಿ ಪಾಕಿಸ್ತಾನದ ಕಡೆಯಲ್ಲಿ 10ರಿಂದ 15 ಟಾರ್ಚ್ಗಳು ಬೆಳಗುವುದು ಕಂಡುಬಂದಿತು. ಇದರ ಬೆನ್ನಲ್ಲೇ ಒಂದಷ್ಟು ಕೂಗಾಟವೂ ಕೇಳಿಸಿತು. ಇದಾದ ಬಳಿಕ ವ್ಯಕ್ತಿಯೊಬ್ಬ ಭಾರತದ ಗಡಿ ಭಾಗದಲ್ಲಿ ಅಳವಡಿಸಿರುವ ಬೇಲಿಯನ್ನು ಮುರಿದು ದಾಟಲು ಮುಂದಾದ. ಈ ಮಾರ್ಗದಲ್ಲಿ, ರಾತ್ರಿ ವೇಳೆ ಭಾರತದೊಳಗೆ ನುಸುಳಲು ಪಾಕ್ನವರು ಮಾಡಿದ ಮೊದಲ ಪ್ರಯತ್ನ ಇದು ಎಂದು ಬಿಎಸ್ಎಫ್ ಅಧಿಕಾರಿಗಳು ಹೇಳಿದ್ದಾರೆ.
ಮುಂದಿನ ಶನಿವಾರ ರಾಷ್ಟ್ರಾದ್ಯಂತ ಸ್ವಾತಂತ್ರ್ಯ ದಿನೋತ್ಸವ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಭಾರತದೊಳಗೆ ನುಸಳಬಹುದು ಎಂಬ ಕಾರಣಕ್ಕಾಗಿ ಭಾರತ-ಪಾಕ್ ಗಡಿಯುದ್ದಕ್ಕೂ ಭಾರತೀಯ ಸೇನಾಪಡೆ ಬಿಗಿಪಹರೆ ಏರ್ಪಡಿಸಿದೆ.