ಧಾರವಾಡ: ವಿದ್ಯಾಗಿರಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜೆ.ಎಸ್.ಎಸ್ ಮುಂಭಾಗದಲ್ಲಿ ಆರಂಭಿಸಿರುವ ಬಿಆರ್ಟಿಎಸ್ ಡಿವೈಡರ್ ಕಾಮಗಾರಿ ವಾಹನ ಸವಾರರಿಗೆ ತಲೆನೋವಾಗಿದೆ.
ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ನೀಡಬೇಕೆನ್ನುವ ಉದ್ದೇಶದಿಂದ ಕಾರ್ಯರೂಪಕ್ಕೆ ಬಂದ ಬಿಆರ್ಟಿಎಸ್ ಇದೀಗ ಸಾರ್ವಜನಿಕರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ.
ಇದಕ್ಕೆ ನಿದರ್ಶನ ಬಿಆರ್ಟಿಎಸ್ನ ಮುಂದುವರಿದ ಡಿವೈಡರ್ ಕಾಮಗಾರಿ.
ಇಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ, ಪಾಲಕರು ಪ್ರತಿದಿನ ಸಂಚರಿಸುತ್ತಾರೆ. ಇಲ್ಲಿನ ರಸ್ತೆ ದಾಟುವುದೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡೆ ಸಾಗಬೇಕು.
ಅಗತ್ಯವಿಲ್ಲದ ಕಡೆ ಪಾದಚಾರಿಗಳ ಮೇಲ್ಸೇತುವೆ ನಿರ್ಮಿಸಿ ಕೈತೊಳೆದುಕೊಂಡಿರುವ ಬಿಆರ್ಟಿಎಸ್, ಇಂಥ ದಟ್ಟಣೆ ಇರುವ ಪ್ರದೇಶದಲ್ಲಿ ಪಾದಚಾರಿಗಳ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ದ್ವಾರದ ಮುಂದೆ ಬ್ಯಾರಿಕೇಡ್ ಅಳವಡಿಸಿ ಕೇವಲ 10- 15 ಅಡಿಗಳಲ್ಲಿ ಸಿಗ್ನಲ್ ಅಳವಡಿಸಿರುವುದು ಅವೈಜ್ಞಾನಿಕ.
ಇದಕ್ಕೆ ಕಿರೀಟವಿಟ್ಟಂತೆ ಇದೀಗ ಮತ್ತೆ 10- 15 ಅಡಿಗಳಷ್ಟು ರಸ್ತೆ ವಿಭಜಕವನ್ನು ಅಳವಡಿಸುತ್ತಿದೆ. ಹುಬ್ಬಳ್ಳಿ, ನವನಗರ, ಗಾಂಧಿನಗರ ಕಡೆಯಿಂದ ಬರುವ ಶಾಲಾ ವಾಹನಗಳು ಬಲಗಡೆ ತಿರುವು ತೆಗೆದುಕೊಳ್ಳಲು (ಯು ಟರ್ನ್) ಸಾಧ್ಯವಾಗುತ್ತಿಲ್ಲ.