ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದ ನಂತರ ಬ್ರಾಹ್ಮಣ ಸಮುದಾಯದ ಕಡೆಯಿಂದ ಭಾರಿ ವಿರೋಧ ವ್ಯಕ್ತವಾಗಿದ್ದು ಅದರ ಕಾವು ಇನ್ನೂ ಇಳಿದಿಲ್ಲ.
ಮಂಡ್ಯದಲ್ಲಿ ನಡೆದ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಭಾದ ಮುಖಂಡ ಸುಬ್ಬರಾಯ ಹೆಗ್ಗಡೆ ಅಸಮಾಧಾನ ವ್ಯಕ್ತಪಡಿಸಿದ್ದು ‘ಬ್ರಾಹ್ಮಣರನ್ನು ಉದ್ದೇಶ ಪೂರ್ವಕವಾಗಿ ತುಳಿಯುವ ಕೆಲಸ ನಡೆಯುತ್ತಿದೆ. ಅದೇ ಕಾರಣಕ್ಕೆ ಒಬ್ಬ ರಾಜಕೀಯ ಮಹಾನ್ ನಾಯಕ, ಗಾಂಧಿಯನ್ನು ಕೊಂದ ವಂಶಸ್ಥರು ಎಂದು ಹೇಳಿದ್ದಾರೆ. ನಮ್ಮನ್ನು ತುಳಿಯಲು ಎರಡು ಉದ್ದೇಶಗಳಿವೆ. ಬ್ರಾಹ್ಮಣರನ್ನು ತುಳಿದರೆ ಹಿಂದುತ್ವವನ್ನು ತುಳಿಯಬಹುದು.
ಬ್ರಾಹ್ಮಣರು ಹಿಂದುತ್ವದ ಆತ್ಮ. ಬ್ರಾಹ್ಮಣರು ಇಲ್ಲದಿದ್ದರೆ ಹಿಂದುತ್ವ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಬ್ರಾಹ್ಮಣರನ್ನು ಹತ್ತಿಕ್ಕಿದ್ದರೆ ಹಿಂದುತ್ವವನ್ನು ಹತ್ತಿಕ್ಕಬಹುದು ಎಂದುಕೊಂಡಿದ್ದಾರೆ. ಹೀಗಾಗಲೇ ನಮ್ಮನ್ನು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹತ್ತಿಕ್ಕಿದ್ದಾರೆ. ನಮ್ಮ ಬಳಿ ಈಗ ಉಳಿದುಕೊಂಡಿರುವುದು ಬುದ್ದಿವಂತಿಕೆ ಮಾತ್ರ. ಇದೀಗ ಬುದ್ದಿವಂತೆಕೆ ಹತ್ತಿಕ್ಕಲು ಪ್ರತ್ನ ಮಾಡುತ್ತಿದ್ದಾರೆ. ಬ್ರಾಹ್ಮಣರನ್ನು ಇಟ್ಟುಕೊಂಡು ಇದೀಗ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಆರ್ಎಸ್ಎಸ್ನವರು ಬ್ರಾಹ್ಮಣರನ್ನು ಪ್ರಹ್ಲಾದ ಜೋಶಿ ಅವರನ್ನು ಸಿಎಂ ಮಾಡುತ್ತಾರೆ ಎಂದು ಹೇಳಿದ್ದಾರೆ.
ಹೀಗೆ ಹೇಳಿದರೆ ಒಕ್ಕಲಿಗರು, ಲಿಂಗಾಯಿತರು ಬಿಜೆಪಿಗೆ ಮತ ನೀಡಲ್ಲ ಎಂದು ಹೀಗೆ ಹೇಳಿದ್ದಾರೆ. ಈ ಹೇಳಿಕೆಯ ಹಿಂದೆ ಈ ರೀತಿಯ ಹುನ್ನಾರವಿದೆ. ನಮ್ಮನ್ನು ತುಳಿಯುವುದು ಒಂದು ಅಜೆಂಡಾ. ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಮತ್ತೊಂದು ಅಜೆಂಡಾ ಆಗಿದೆ. ಇದನ್ನು ತಡೆಯಲು ನಾವೆಲ್ಲರೂ ಒಗ್ಗಟ್ಟು ಆಗಬೇಕು’ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.