ಮುಂಬೈ: ಅದ್ಯಾಕೋ ಸಲ್ಮಾನ್ ಖಾನ್ ಅಭಿನಯದ ರಾಧೇ ಚಿತ್ರ ಬಿಡುಗಡೆಯಾದ ಸಮಯವೇ ಸರಿ ಇಲ್ಲ. ಚಿತ್ರವು ಗುರುವಾರ ಬಿಡುಗಡೆಯಾದಾಗಿನಿಂದ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಇದೆ. ಮೊದಲಿಗೆ, ಚಿತ್ರ ಚೆನ್ನಾಗಿಲ್ಲ ಎಂದು ಜನ ಬೇಸರ ಮಾಡಿಕೊಂಡಿದ್ದಾರೆ. ಎರಡನೆಯದಾಗಿ, ಈಗಾಗಲೇ ಪೈರಸಿ ಕಾಪಿ ಹೊರಬಿದ್ದಿದೆ. ಇಷ್ಟೆಲ್ಲ ಸಾಲದು ಎಂಬಂತೆ ಟ್ವಿಟರ್ನಲ್ಲಿ ಇದೀಗ ಬಾಯ್ಕಾಟ್ ರಾಧೇ ಎಂಬ ಅಭಿಯಾನ ಶುರುವಾಗಿದೆ.
ಇದನ್ನೂ ಓದಿ: ಕೆಲಸ ಮಾಡುವವರೇ ತಪ್ಪು ಮಾಡುವುದು : ಅನುಪಂ ಖೇರ್ ಮಾರ್ಮಿಕ ನುಡಿ
ಹೌದು, ಟ್ವಿಟರ್ನಲ್ಲಿ ಬಾಯ್ಕಾಟ್ ರಾಧೇ ಎಂಬ ಅಭಿಯಾನ ಶುರುವಾಗಿದೆ. ಯಾಕೆ ಎಂಬುದಕ್ಕೆ ನಿರ್ಧಿಷ್ಟವಾದ ಕಾರಣವಿಲ್ಲ. ಚಿತ್ರದ ಹೆಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದರಿಂದ, ಇಂಥದ್ದೊಂದು ಅಭಿಯಾನ ಶುರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲಿವುಡ್ನಲ್ಲಿ ನೆಪೋಟಿಸಂ ಹೆಚ್ಚುತ್ತಿರುವುದಕ್ಕೆ ಸಲ್ಮಾನ್ ಸಹ ಒಬ್ಬ ಪ್ರಮುಖ ಕಾರಣವಾಗಿರುವುದರಿಂದ ಅವರ ಚಿತ್ರಗಳನ್ನು ಬಾಯ್ಕಾಟ್ ಮಾಡಲಾಗುತ್ತಿದೆಯಂತೆ.
ಎಲ್ಲಕ್ಕಿಂತ ಮುಖ್ಯವಾಗಿ, ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಈ ಚಿತ್ರವನ್ನು ಬಾಯ್ಕಾಟ್ ಮಾಡಿ ಎಂದು ಅಭಿಯಾನದ ಮುಂಚೂಣಿಯಲ್ಲಿದ್ದಾರೆ. ಸಲ್ಮಾನ್ ಖಾನ್ ತರಹದವರು ಅವಮಾನ ಮಾಡಿ ದೂರ ಇಟ್ಟಿದ್ದರಿಂದಲೇ ಸುಶಾಂತ್ ಸಿಂಗ್ಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ ಮತ್ತು ಅದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸುಶಾಂತ್ ನಿಧನದ ಕೆಲವೇ ದಿನಗಳಲ್ಲಿ ಕೇಳಿಬಂದಿತ್ತು. ಈ ಕುರಿತು ಪಟ್ನಾದಲ್ಲಿ ಗಲಾಟೆಗಳೂ ಆಗಿದ್ದವು ಮತ್ತು ಸಲ್ಮಾನ್ ಅವರ ಪ್ರತಿಕೃತಿಯನ್ನು ದಹಿಸಲಾಗಿತ್ತು. ಈಗ ಸುಶಾಂತ್ ಸಿಂಗ್ ಅವರ ಅಭಿಮಾನನಿಗಳು ಸಹ ಈ ಅಭಿಯಾನಕ್ಕೆ ದೊಡ್ಡ ಮಟ್ಟದಲ್ಲಿ ಕೈಜೋಡಿಸಿದ್ದಾರೆ.
ಇದನ್ನೂ ಓದಿ: ಪೋಲೆಂಡ್ನಿಂದ 50 ಕಾನ್ಸಂಟ್ರೇಟರ್ಗಳನ್ನು ತರಿಸುತ್ತಿದ್ದಾರೆ ಬಿಗ್ಬಿ
ಒಟ್ಟಿನಲ್ಲಿ, ರಾಧೇ ಚಿತ್ರವು ಪಾಸಿಟಿವ್ ವಿಷಯಗಳಿಗಿಂತ ಇಂತಹ ನೆಗೆಟಿವ್ ವಿಷಯಗಳಿಗೇ ಹೆಚ್ಚು ಸುದ್ದಿ ಮಾಡುತ್ತಿದೆ. ಎಷ್ಟೇ ನೆಗೆಟಿವ್ ಪ್ರಚಾರವಾದರೂ, ಚಿತ್ರಕ್ಕೇನೂ ಸಮಸ್ಯೆ ಇಲ್ಲ. ಏಕೆಂದರೆ, ಈಗಾಗಲೇ ಚಿತ್ರದ ಸ್ಯಾಟಿಲೈಟ್, ಡಿಜಿಟಲ್ ಮತ್ತು ವಿತರಣಾ ಹಕ್ಕುಗಳನ್ನು ಜೀ ಸಂಸ್ಥೆಯು 190 ಕೋಟಿಗೆ ಖರೀದಿಸಿದ್ದು, ಏನಿಲ್ಲವೆಂದರೂ ಈ ಚಿತ್ರದಿಂದ ಸಲ್ಮಾನ್ ಖಾನ್ 100 ಕೋಟಿ ಪ್ರಾಫಿಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.