ಮಂಗಳೂರು: ಪಣಂಬೂರು ಬೀಚ್ನಲ್ಲಿ ನೀರಿನಲ್ಲಿ ಈಜಾಡುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಬೆಂಗಳೂರು ಮೂಲದ ದಿನೇಶ್ (20) ಎಂಬುವರು ನಾಪತ್ತೆಯಾಗಿದ್ದು, ಸೋಮವಾರ ಸಾಯಂಕಾಲದವರೆಗೂ ಪತ್ತೆಯಾಗಿಲ್ಲ.
ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸಕ್ಕೆ ಬಂದಿದ್ದ ಗೆಳೆಯರಾದ ದೀಪಕ್, ಶ್ರೀನಿವಾಸ್, ಪ್ರಶಾಂತ್, ಸುನೀಲ್, ಸುದೀಪ್, ಪ್ರಜ್ವಲ್, ದಿನೇಶ್ ಹಾಗೂ ಸೀನಾ ಅವರು ಸೋಮವಾರ ಮಧ್ಯಾಹ್ನ ಪಣಂಬೂರು ಬೀಚ್ಗೆ ಭೇಟಿ ನೀಡಿದ್ದಾರೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಸ್ಥಳಿಯರು ನೀರಿಗೆ ಇಳಿಯದಂತೆ ಮನವಿ ಮಾಡಿದರೂ, ಕೇಳದೆ ನೀರಿಗೆ ಇಳಿದಿದ್ದಾರೆ.
ಸಮುದ್ರದಲ್ಲಿ ಈಜುತ್ತಾ ದಿನೇಶ್ ಸ್ವಲ್ಪ ಮುಂದಕ್ಕೆ ಹೋಗಿದ್ದು, 1 ಗಂಟೆಯ ವೇಳೆಗೆ ಬಲವಾದ ಅಲೆಯೊಂದು ಬಂದು ಕೊಚ್ಚಿ ಹೋಗಿ ಕಾಣೆಯಾಗಿದ್ದಾರೆ. ಇತರರನ್ನು ಸ್ಥಳೀಯರು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ. ಘಟನೆ ಕುರಿಂತಂತೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.